ನಾಗೇಂದ್ರ ಸ್ಥಾನಕ್ಕೆ ಯಾರು? ಅನ್ನಪೂರ್ಣಗೆ ಒಲಿಯುವುದೇ ಮಂತ್ರಿಗಿರಿ? ಡಿಕೆಶಿ ಮತ್ತೆ ದೆಹಲಿಗೆ!
Views: 13
ಕನ್ನಡ ಕರಾವಳಿ ಸುದ್ದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪಕ್ಕೆ ರಾಜೀನಾಮೆ ನೀಡಿರುವ ನಾಗೇಂದ್ರ ಅವರ ಸ್ಥಾನಕ್ಕೆ ಬದಲಿ ಯಾರು ಎನ್ನುವ ಕುತೂಹಲದ ನಡುವೆಯೇ, ಅದೇ ಜಿಲ್ಲೆಯ ಅನ್ನಪೂರ್ಣ ಅವರಿಗೆ ‘ಲಕ್’ ಹೊಡೆಯುವುದು ಬಹುತೇಕ ಎನ್ನಲಾಗುತ್ತಿದೆ.
ಬಿಜೆಪಿಯ ಪಾದಯಾತ್ರೆಯ ಉದ್ದೇಶವನ್ನು ನಿಷ್ಕ್ರಿಯಗೊಳಿಸಲು ನಾಗೇಂದ್ರ ರಾಜೀನಾಮೆಗೆ ಹೈಕಮಾಂಡ್ ಸಮ್ಮತಿಸಿತ್ತು. ಆದರೀಗ, ಖಾಲಿಯಾಗಿರುವ ಈ ಸ್ಥಾನವನ್ನು ಅದೇ ಸಮುದಾಯಕ್ಕೆ ನೀಡಬೇಕು ಎನ್ನುವ ಒತ್ತಡಗಳು ಹೆಚ್ಚಾಗಿವೆ. ಅದೇ ಸಮುದಾಯದ ಹಲವರ ಹೆಸರು ಓಡುತ್ತಿದ್ದರೂ, ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಅದೇ ಜಿಲ್ಲೆಯ, ಅದೇ ಸಮುದಾಯದ ಅನ್ನ ಪೂರ್ಣ ತುಕಾರಾಂ ಅವರಿಗೆ ನೀಡುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.
ಅನ್ನಪೂರ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮಹಿಳಾ, ಜಿಲ್ಲಾ ಹಾಗೂ ಸಮುದಾಯದ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಇದರಿಂದ ಮಹಿಳಾ ಕೋಟಾದಲ್ಲಿ ಉಳಿಯುವ ಒಂದು ಸ್ಥಾನವನ್ನು ಬೇರೆಯವರಿಗೆ ನೀಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ತೀವ್ರ ಅಸಮಾಧಾನ ಶುರುವಾಗಿರುವುದರಿಂದ ಹಾಲಿ ಸಚಿವರಿಂದ ರಾಜೀನಾಮೆ ಪಡೆದು, ಬಂಡಾಯವೆದ್ದಿರುವ ಶಾಸಕರಿಗೆ ಆ ಸ್ಥಾನ ನೀಡುವ ಲೆಕ್ಕಾಚಾರದಲ್ಲಿ ನಾಯಕರಿದ್ದರು. ಖಾಲಿಯಿರುವ ಒಂದು ಸ್ಥಾನದೊಂದಿಗೆ, ನಾಗೇಂದ್ರ ಅವರಿಂದ ತೆರವಾದ ಸ್ಥಾನ ಸೇರಿ ದರೆ ಒಟ್ಟು ಎರಡು ಖಾಲಿ ಇವೆ.
ಡಿಕೆಶಿ ಮತ್ತೆ ದೆಹಲಿಗೆ: ಈ ಎಲ್ಲ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ಮತ್ತೊಮ್ಮೆ ತೆರಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಸೋಮವಾರ ರಾಹುಲ್ ಗಾಂಧಿ ಅವರು ಸಮಯ ನೀಡಿ, 3ನೇ ಹಂತದ ಸಂಪುಟ ವಿಸ್ತರಣೆ ಅಂತಿಮಗೊಳಿಸೋಣ ಎನ್ನುವ ಮಾತನ್ನು ಹೇಳಿದ್ದಾರೆ. ಆದ್ದರಿಂದ ಸೋಮವಾರ ಡಿ.ಕೆ.ಶಿವಕುಮಾರ್ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ. ಡಿಕೆ ಜತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೂ ಸೋಮವಾರ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿದ್ದು, ಬಹುತೇಕ ಸೋಮವಾರ 3ನೇ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎನ್ನಲಾಗಿದೆ. ಈ ನಡುವೆ ದೆಹಲಿಯಲ್ಲಿ ಸೋಮವಾರ ವರಿಷ್ಠರ ಸಭೆ ನಿಗದಿಯಾಗಿರುವ ನಡುವೆಯೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಕ್ಕೆ ಕನಿಷ್ಠ ಎಂಟು ಶಾಸಕರು ದೆಹಲಿ ಕದ ತಟ್ಟಿದ್ದಾರೆ. ಭಾನುವಾರ ಇನ್ನಷ್ಟು ಶಾಸಕರು ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ.
–






