ನೈಋತ್ಯ ಮುಂಗಾರು ಈ ಬಾರಿ ಮತ್ತೆ ವಿಳಂಬ? ಹವಾಮಾನ ಇಲಾಖೆ ಅಭಿಪ್ರಾಯವೇನು?
Views: 149
ಕನ್ನಡ ಕರಾವಳಿ ಸುದ್ದಿ: ನೈಋತ್ಯ ಮುಂಗಾರು ಈ ಬಾರಿ ಕೇರಳಕ್ಕೆ ಪ್ರವೇಶಿಸುವುದು ವಿಳಂಬವಾಗಿದೆ. ಈ ಸಲವೂ ಮೇ 26ರ ಹೊತ್ತಿಗೆ ಮುಂಗಾರು ಪ್ರವೇಶ ಆಗಲಿದೆ ಎಂದು ಮೊದಲು IMD ಹೇಳಿತ್ತು. ಆದರೆ ಇದೀಗ ಮತ್ತೆ ವಿಳಂಬವಾಗಿದೆ.
ಈ ಸಲ ನೈಋತ್ಯ ಮಾನ್ಸೂನ್ ಜೂ.3-4ಕ್ಕೆ ಕೇರಳಕ್ಕೆ ಪ್ರವೇಶ ಆಗಲಿದೆ. ಅದಕ್ಕೂ ಮೊದಲು ಮಾನ್ಸೂನ್ ಪ್ರಭಾವ ಇಲ್ಲ ಎಂದು ಹೇಳಲಾಗಿತ್ತು. ಆದರೆ ಜೂ.3ರ ಹೊತ್ತಿಗೂ ಮುಂಗಾರು ಪ್ರವೇಶ ಆಗುವುದು ಅನುಮಾನವಿದ್ದಂತೆ ಇದೆ. ಮುಂಗಾರು ಪ್ರವೇಶದ ನಿಖರ ದಿನಾಂಕವನ್ನ ಹೇಳಲು ಸಾಧ್ಯವಾಗುತ್ತಿಲ್ಲ.
ಕೇರಳಕ್ಕೆ ಮಾನ್ಸೂನ್ ಆಗಮಿಸಿತು ಎಂದು ಗೊತ್ತಾಗಲು ವಾತಾವರಣದಲ್ಲಿ ಮೂರು ಸ್ಥಿತಿಗಳು ಒಂದೇ ಸಲಕ್ಕೆ ಉಂಟಾಗಬೇಕು. ಕೇರಳದಾದ್ಯಂತ ಗೊತ್ತುಪಡಿಸಿದ ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ಶೇ.60ರಷ್ಟು ಮಳೆಯಾಗಬೇಕು. ಅರೇಬಿಯನ್ ಸಮುದ್ರದ ಮೇಲೆ ಒಂದು ನಿರ್ದಿಷ್ಟ ವೇಗದ ಪಶ್ಚಿಮ ಮಾರುತಗಳು ಮತ್ತು ಉಪಗ್ರಹದಿಂದ ಪತ್ತೆಯಾದ ಸಾಕಷ್ಟು ಮೋಡದ ಹೊದಿಕೆ ಕಂಡುಬರಬೇಕು. ಹೀಗಾದಾಗ ಮಾನ್ಸೂನ್ ಕಾಲಿಟ್ಟಿದೆ ಎಂದು ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಸದ್ಯದ ಮಟ್ಟಿಗೆ ಪಶ್ಚಿಮ ಮಾರುತಗಳದ್ದೇ ಸಮಸ್ಯೆ ಕಾಣಿಸುತ್ತಿದೆ. ಕೇರಳದ ಕರಾವಳಿ ತೀರದ ಮೇಲಿನ ಗಾಳಿಗಳು ತುಂಬ ದುರ್ಬಲವಾಗಿವೆ. ಮುಂಗಾರು ಮಳೆಯನ್ನ ತರುವಷ್ಟು ಸಮರ್ಥವಾಗಿಲ್ಲ. ಹಾಗಿದ್ದಾಗ್ಯೂ ತೇವಾಂಶವನ್ನು ಒಳಗೊಂಡಿದ್ದು, ಕೇರಳದಲ್ಲಿ ಅಲ್ಲಲ್ಲಿ ಮಳೆ ತರುತ್ತಿವೆ. ಲಕ್ಷದ್ವೀಪದಲ್ಲೂ ಚದುರಿದ ಮಳೆಯಾಗುತ್ತಿದೆ. ಆದರೆ ಇದನ್ನ ಅಧಿಕೃತವಾಗಿ ಮುಂಗಾರು ಆರಂಭ ಎಂದು ಘೋಷಿಸಲು ಸಾಧ್ಯವಿಲ್ಲ.






