ಇತರೆ

ಕರ್ತವ್ಯದ ಸಮಯದಲ್ಲಿ ಸಿದ್ದರಬೆಟ್ಟದಲ್ಲಿ ಗುಂಡು ಪಾರ್ಟಿ ಮಾಡಿದ್ದ 6 ಪಿಡಿಓ, ಇಬ್ಬರು ಕಾರ್ಯದರ್ಶಿ, ಎಸ್.ಡಿ.ಎ. ಅಮಾನತು

Views: 49

ಕನ್ನಡ ಕರಾವಳಿ ಸುದ್ದಿ: ಕೆಲಸದ ಅವಧಿಯಲ್ಲಿ ಗ್ರಾ.ಪಂ. ಅಧಿಕಾರಿ ಮತ್ತು ಸಿಬ್ಬಂದಿ ಸಿದ್ದರಬೆಟ್ಟದ ತಪ್ಪಲಲ್ಲಿ ಮದ್ಯ ಸಹಿತ ಪಾರ್ಟಿ ಮಾಡಿದ ಬಗ್ಗೆ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿ, ಇಬ್ಬರು ಕಾರ್ಯದರ್ಶಿ ಮತ್ತು ಒಬ್ಬ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಶುಕ್ರವಾರ (ಜು.24ರಂದು) ಸಂಜೆ ಸಿದ್ದರಬೆಟ್ಟದ ಬಳಿ ಮದ್ಯ, ಮಾಂಸ ಸೇವಿಸಿ ಮೋಜು ಮಸ್ತಿ ಮಾಡಿದ ಬಗ್ಗೆ ಹಲವು ಮಾಧ್ಯಮಗಳಲ್ಲಿ ದೃಶ್ಯ ಸಹಿತ ವರದಿ ಪ್ರಸಾರವಾಗಿದ್ದ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕಾರಣ ಕೇಳಿ ನೋಟಿಸ್‌ ನೀಡಿ, ಕರ್ತವ್ಯದ ಸಮಯದಲ್ಲಿ ಒಂದು ಕಡೆ ಸೇರಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಮಾನತು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ ಖಂಡ್ರೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ 6 ಪಿಡಿಓ ಹಾಗೂ ಸಿಬ್ಬಂದಿಗೆ ನೋಟಿಸ್‌ ನೀಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್ ಅವರು, ಇಂದು ಈ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಗಂಗೆ ಗ್ರಾ.ಪಂ.ನ ಗಿರೀಶ್; ಅಗಳಕುಪ್ಪೆಗ್ರಾ.ಪಂ.ನ ಹರೀಶ್; ಗೊಲ್ಲಹಳ್ಳಿ ಗ್ರಾ.ಪಂ.ನ ಪ್ರಶಾಂತ್ ಡಿ; ಮಣ್ಣೆ ಗ್ರಾ.ಪಂ.ನ ಚಿರಂಜೀವಿ; ಸೋಂಪುರ ಗ್ರಾ.ಪಂ. ರವಿಶಂಕರ್; ಬೆಟ್ಟಕೋಟೆ ಗ್ರಾ.ಪಂ.ನ ದಿನೇಶ್ ಬಿ.ಎಂ.; ಅಗಳಕುಪ್ಪೆ ಗ್ರೇಡ್ 1 ಕಾರ್ಯದರ್ಶಿ ಕೆಂಪರಂಗಯ್ಯ; ಬೂದಿಹಾಲ್ ಗ್ರಾ.ಪಂ. ಗ್ರೇಡ್ 2 ಕಾರ್ಯದರ್ಶಿ ಗಂಗಾಧರ್;ಸೋಂಪುರ ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜುನಾಥ್ ಇವರುಗಳನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ ಉಲ್ಲಂಘಿಸಿರುವುದು ಹಾಗೂ ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲದ ಕಾರಣದ ಮೇಲೆ ಈ ಅಮಾನತು ಆದೇಶ ಹೊರಡಿಸಲಾಗಿದೆ.

Related Articles

Back to top button
error: Content is protected !!