ಕುಂದಾಪುರದಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

Views: 218
ಕನ್ನಡ ಕರಾವಳಿ ಸುದ್ದಿ:ಕುಂದಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ ತಿಂಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಕುಂದಾಪುರ ಭಾಗದಲ್ಲಿ ನಡೆದ ಕಳ್ಳತನ ಕೃತ್ಯಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸೊಲ್ಲಾಪುರ ಭಾಗದ ನಿವಾಸಿಗಳಾದ ವಿವೇಕ್ ಅಂಬರ್ (26), ಅಜೀಜ್ (28), ಲಖನ್ ಅಶೋಕ್ ಕುಲಕರ್ಣಿ (31) ಹಾಗೂ ಸಂದೀಪ್ ದಿಲೀಪ್ (25) ಬಂಧಿತ ಆರೋಪಿಗಳು.
ಅವರು ಜು. 19ರಂದು ಇಲ್ಲಿನ ಪುರಸಭೆ ವ್ಯಾಪ್ತಿಯ ಬಿಬಿ ರಸ್ತೆಯ ವೆಸ್ಟ್ ಬ್ಲಾಕ್ನಲ್ಲಿರುವ ರೋಹಿತ್ ಅವರ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ಸೊತ್ತುಗಳನ್ನು ಕಳವುಗೈದಿದ್ದರು. ಇಲ್ಲಿನ ಪಿ. ರವೀಂದ್ರ ಅವರ ಮನೆಗೆ ನುಗ್ಗಿದ ಕಳ್ಳರು ಬೆಳ್ಳಿ, ಚಿನ್ನಾಭರಣ ಸೇರಿದಂತೆ ಒಟ್ಟಾರೆ 4.57 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದರು. ಇದಲ್ಲದೆ ಹಳಿಯಾಳ ಠಾಣೆ ವ್ಯಾಪ್ತಿಯಲ್ಲೂ ನಡೆದ ಕಳ್ಳತನದಲ್ಲಿ ಭಾಗಿಯಾಗಿದ್ದರು.
ಬಂಧಿತರ ಪೈಕಿ ಲಖನ್ ವಿರುದ್ಧ ಕರ್ನಾಟಕದ ವಿವಿಧೆಡೆ 28 ಪ್ರಕರಣ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲೂ ಪ್ರಕರಣ ದಾಖಲಾಗಿದೆ. ಅಜೀಜ್ ವಿರುದ್ಧ ಕರ್ನಾಟಕದಲ್ಲಿ 2 ಪ್ರಕರಣ, ಮಹಾರಾಷ್ಟ್ರದಲ್ಲಿಯೂ ಪ್ರಕರಣ ದಾಖಲಾಗಿದೆ. ಸಂದೀಪ್ ವಿರುದ್ಧ ಮಹಾರಾಷ್ಟ್ರದಲ್ಲಿ ಸುಲಿಗೆ, ಕಳ್ಳತನ ಪ್ರಕರಣ ದಾಖಲಾಗಿದೆ.