ಕನ್ನಡ ಕರಾವಳಿ ಸುದ್ದಿ: ವಿನಾಯಕ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಮಿಥುನ ಮಾಸದ ಮೊದಲ ದಿನ ಪರ್ಯಾಯ ಹಸ್ತಾಂತರ ಕಾರ್ಯಕ್ರಮ ಜೂನ್ 16 ರಂದು ನಡೆಯಿತು.
ಸಂಪ್ರದಾಯದಂತೆ ಉಪಾಧ್ಯಾಯ ಕುಟುಂಬದ ಕುಲ ಪುರೋಹಿತರಾದ ಹೂವಿನಕೆರೆ ವಾದಿರಾಜ ಭಟ್, ನೇರಂಬಳ್ಳಿ ಪ್ರಾಣೇಶ ತಂತ್ರಿ, ವಾದೀಶ ಭಟ್ ಹಾಗು ಇತರ ಪುರೋಹಿತರ ಸಮ್ಮುಖದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಹಿಂದಿನ ಪರ್ಯಾಯ ಅರ್ಚಕರಾದ ಕೃಷ್ಣಾನಂದ ಉಪಾಧ್ಯಾಯರು ಮುಂದಿನ ಪರ್ಯಾಯ ಅರ್ಚಕರಾದ ವ್ಯಾಸ ಉಪಾಧ್ಯಾಯ ಸಹೋದರರಿಗೆ ಕೀಲಿಕೈ ಹಸ್ತಾಂತರಿಸುವ ಮೂಲಕ ಮುಂದಿನ ಒಂದು ವರ್ಷ ಅವಧಿ ಯವರೆಗೆ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿದರು.
ದೇವಳದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ.ನಿರಂಜನ ಉಪಾಧ್ಯಾಯ, ಕೆ.ಪದ್ಮನಾಭ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ವೃಂದ, ಪುರೋಹಿತ ವರ್ಗ, ಸಿಬಂದಿಗಳು ಉಪಾಧ್ಯಾಯ ಕುಟುಂಬದವರು ಉಪಸ್ಥಿತರಿದ್ದರು.
ಹೂವಿನಕೆರೆ ಶ್ರೀ ವಾದಿರಾಜ ಭಟ್ಟರಿಂದ 5,00,121ರೂಪಾಯಿ ಕಾಣಿಕೆ
ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಹಿರಿಯ ಪುರೋಹಿತರು, ವೇದಪಂಡಿತರು ಹಾಗೂ ಆಚಾರ್ಯರಾಗಿರುವ ಶ್ರೀ ವಾದಿರಾಜ ಭಟ್ಟರು ಮೂಲತಃ ಉಡುಪಿಯ ಬಡನಿಡಿಯೂರಿನವರು. ಅವರ ತಂದೆಯಾದ ಶ್ರೀ ರಾಮಕೃಷ್ಣ ಭಟ್ಟರು ಹೂವಿನಕೆರೆಯ ವಾದಿರಾಜ ಮಠದಲ್ಲಿ ಪೌರೋಹಿತ್ಯ ಸೇವೆ ನಿರ್ವಹಿಸುತ್ತಿದ್ದರು. ಅವರು ಆನೆಗುಡ್ಡೆಯ ಉಪಾಧ್ಯಾಯ ಕುಟುಂಬದ ಕುಲಪುರೋಹಿತರಾಗಿ ಮೂರು ತಲೆಮಾರುಗಳಿಂದ ನಿರಂತರವಾಗಿ ಧಾರ್ಮಿಕ ಸೇವೆ ನಡೆಸುತ್ತಾ ಬಂದಿದ್ದಾರೆ.
ಶ್ರೀ ವಾದಿರಾಜ ಭಟ್ಟರ ಕುಟುಂಬವು ಆನೆಗುಡ್ಡೆ ಶ್ರೀ ವಿನಾಯಕ ದೇವರ ಅಪಾರ ಭಕ್ತರಾಗಿದ್ದು, ಸದಾ ಶ್ರದ್ಧಾ-ಭಕ್ತಿಯಿಂದ ದೇವರ ಸೇವೆಯಲ್ಲಿ ನಿರತರಾಗಿರುತ್ತಾರೆ. ದೇವಾಲಯದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ಶ್ರೀ ವಾದಿರಾಜ ಭಟ್ಟರು ರೂ. 5,00,121 (ಐದು ಲಕ್ಷ ಒಂದು ಇಪ್ಪತ್ತೊಂದು ರೂಪಾಯಿ) ಧನವನ್ನು ಕಾಣಿಕೆಯಾಗಿ ನೀಡಿರುತ್ತಾರೆ.