ಜನಮನ

ಮಾ.15ರಿಂದ ಎಪ್ರಿಲ್ 30ರವರೆಗೆ ಶಿರಾಡಿ ಘಾಟ್ ವಾಹನ ಸಂಚಾರ ಬಂದ್‌?

Views: 68

ಕನ್ನಡ ಕರಾವಳಿ ಸುದ್ದಿ: ಮಾ.15 ರಿಂದ ಎಪ್ರಿಲ್ ಅಂತ್ಯದವರೆಗೆ ಶಿರಾಡಿಯಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆಯಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಜೂ. 30 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ ಎಐ) ಕನಿಷ್ಠ ಒಂದು ತಿಂಗಳು ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಹಾಸನ ಜಿಲ್ಲಾಡಳಿತ ಸ್ಪಂದಿಸಿದೆ.

ಸಂಸದ ಶ್ರೇಯಸ್ ಪಟೇಲ್ ಗುರುವಾರ ಕಾಮಗಾರಿ ಪರಿವೀಕ್ಷಣೆ ನಡೆಸಿದ ವೇಳೆ ಈ ವಿಷಯ  ಪ್ರಸ್ತಾಪಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಡಚಣೆಯಾಗದಂತೆ ಶಿರಾಡಿ ಘಾಟಿಯಲ್ಲಿ ಕನಿಷ್ಠ ಒಂದು ತಿಂಗಳು ವಾಹನ ಸಂಚಾರವನ್ನು ನಿರ್ಬಂಧಿಸುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ.

ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿರುವುದರಿಂದ ಒಂದು ಪಥಕ್ಕೆ ಕಾಂಕ್ರೀಟ್ ಹಾಕಿದಾಗ ಅದರ ಕ್ಯೂರಿಂಗ್‌ಗೆ 25 ದಿನಗಳು ಬೇಕು. ಹಾಗಾಗಿ ಈ ವೇಳೆ ವಾಹನ ಸಂಚಾರ ನಿಷೇಧ ಮಾಡಬೇಕಾಗುತ್ತದೆ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.

ಶಿರಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಗುರುತಿಸಲಾಗಿದೆ. ವಾಹನ ಸಂಚಾರ ನಿಷೇಧಿಸುವ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಸಕಲೇಶಪುರದ ದೋಣಿಗಾಲ್ ಕ್ರಾಸ್‌ನಿಂದ ಮಾರನಹಳ್ಳಿವರೆಗೆ 10 ಕಿ.ಮೀ. ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಈ ವರೆಗೆ 4.8 ಕಿ.ಮೀ. ರಸ್ತೆ ನಿರ್ಮಾಣ ಆಗಿದೆ. ಭೂ ಕುಸಿತವಾಗುವ ಸಂಭಾವ್ಯ ಸ್ಥಳದಲ್ಲಿ ರಸ್ತೆ ಜತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಎನ್ ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button