ಶರಣಾಗತಿ ಪ್ರಕ್ರಿಯೆ ಮೊದಲೇ ಆಗಿದ್ದರೆ ಅಣ್ಣನ ಜೀವ ಉಳಿಯುತ್ತಿತ್ತು..ಶರಣಾಗತಿ ಪ್ಯಾಕೇಜ್ ನಮಗೂ ನೀಡಿ: ವಿಕ್ರಂ ಗೌಡನ ಸಹೋದರ

Views: 99
ಕನ್ನಡ ಕರಾವಳಿ ಸುದ್ದಿ: ಶರಣಾಗತಿಗೆ ಸಮಿತಿಯವರು ಮೊದಲೇ ಪ್ರಯತ್ನಿಸಿದ್ದರೆ ನನ್ನ ಅಣ್ಣನ ಜೀವ ಉಳಿಯುತ್ತಿತ್ತು. ಜೈಲಿನಲ್ಲಿಯಾದರೂ ಆತ ಇರುತ್ತಿದ್ದ. ಆದರೆ ಆತನನ್ನು ಎನ್ಕೌಂಟರ್ ಮಾಡಿದ ಕಾರಣ ಇಂದು ಆತ ನಮ್ಮೊಂದಿಗಿಲ್ಲ. ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಷ್ಟದ ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಯಾವ ಸಮಿತಿಯೂ ಬಂದು ಭೇಟಿ ಮಾಡಿಲ್ಲ. ನಮಗೂ ನಕ್ಸಲ್ ಶರಣಾಗತಿಯ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶರಣಾಗತಿ ಕುರಿತು ಪ್ರತಿಕ್ರಿಯೆ ನೀಡಿರುವ ವಿಕ್ರಂ ಗೌಡ ಸಹೋದರಿ ಸುಗುಣ ನಕ್ಸಲ್ ಶರಣಾಗತಿ ಪ್ಯಾಕೇಜ್ ನಮಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನವೆಂಬರ್ 18 ರಂದು ನಡೆದಿದ್ದ ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ನಡೆದ ಬೆಳವಣಿಗೆಯಲ್ಲಿ ಇದೀಗ ಆರು ಜನ ನಕ್ಸಲರು ಮುಖ್ಯವಾಹಿನಿಗೆ ಕಾಲಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗತಿ ಆಗುವ ಮೂಲಕ ನಕ್ಸಲ್ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ.
ನಾಗರಿಕ ಸಮಿತಿ ಮತ್ತು ಶರಣಾಗತಿ ಸಮಿತಿ ಸರ್ಕಾರದ ಜೊತೆ ಮಾತುಕತೆ ನಡೆಸಿ ಈ ಶರಣಾಗತಿ ಮಾಡಿಸಿದ್ದಾರೆ. ಆದರೆ ಇದು ವಿಕ್ರಂ ಗೌಡ ಅವರ ಸಹೋದರ ಹಾಗೂ ಸಹೋದರಿಯರಿಗೆ ಬೇಸರ ತರಿಸಿದ್ದು, ನಮ್ಮ ಅಣ್ಣ ಜೀವಂತವಾಗಿದ್ದಾಗ ಈ ಪ್ರಕ್ರಿಯೆ ನಡೆಯಬೇಕಿತ್ತು ಎಂದಿದ್ದಾರೆ. ನಕ್ಸಲರು ಶರಣಾಗುತ್ತಿರುವುದು ಒಳ್ಳೆಯ ವಿಚಾರವಾಗಿದ್ದು, ಅವರೂ ನಮ್ಮಂತೆ ಜೀವಿಸಲಿ ಎಂದಿರುವ ಸಹೋದರ ಸುರೇಶ್ ಗೌಡ ಈ ಯೋಜನೆ ಮೊದಲೇ ತಂದಿದ್ದರೆ ನನ್ನ ಅಣ್ಣ ಕೂಡಾ ಬದುಕಿ ಉಳಿಯುತ್ತಿದ್ದ ಎಂದು ಹೇಳಿದ್ದಾರೆ.






