ಇತರೆ

ಪತಿಗೆ ಕೈ ಕೊಟ್ಟು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಕ್ಕಳನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿದ ತಾಯಿ! 

Views: 120

ಬೆಂಗಳೂರು ಪತಿಗೆ ಕೈ ಕೊಟ್ಟು ಬೆಂಗಳೂರಿನಿಂದ ಪರಾರಿಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿಕೊಂಡು ತಾನು ಜನ್ಮ ನೀಡಿದ್ದ ಕರುಳ ಕುಡಿಗಳನ್ನೇ ಕೊಲೆ ಮಾಡಿ ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ ರಾಮನಗರದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಟ್ಯಾನರಿ ರಸ್ತೆಯಲ್ಲಿರುವ ಎ.ಕೆ ಕಾಲೋನಿ ನಿವಾಸಿ 24 ವರ್ಷದ ಮಹಿಳೆ ತನ್ನ ಮೂರು ವರ್ಷ ಹಾಗೂ 11 ತಿಂಗಳ ಕರುಳ ಕುಡಿಗಳನ್ನೇ ಬಲಿ ಪಡೆದ ಕ್ರೂರಿ ತಾಯಿ ಎಂದು ಗುರುತಿಸಲಾಗಿದೆ.

ಡಿ.ಜೆ ಹಳ್ಳಿಯಲ್ಲಿ ವಾಸವಾಗಿದ್ದ ಪತಿಯೊಂದಿಗೆ ವಾಸವಾಗಿದ್ದ ಮಹಿಳೆ ಕೆಲವು ದಿನಗಳ ಹಿಂದೆ ಪತಿಗೆ ಕೈಕೊಟ್ಟು ತನ್ನ ಎರಡು ಮಕ್ಕಳ ಜೊತೆಗೆ 27 ವರ್ಷದ ಪ್ರಿಯಕರನೊಂದಿಗೆ ಪರಾರಿಯಾಗಿದ್ದರು.

ಈ ಕುರಿತಂತೆ ಮಹಿಳೆಯ ಪತಿ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪತ್ನಿ -ಮಕ್ಕಳು ಕಾಣೆಯಾಗಿರುವ ಬಗ್ಗೆ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಅತ್ತ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆ ರಾಮನಗರದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಪೇಗೌಡ ಸರ್ಕಲ್ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸ್ವಲ್ಪ ದಿನ ಮಕ್ಕಳೊಂದಿಗೆ ಚೆನ್ನಾಗಿಯೇ ಇದ್ದ ಮಹಿಳೆಗೆ ಅದೆನಾಯಿತೋ ಗೊತ್ತಿಲ್ಲ ತನ್ನ ಪ್ರಿಯಕರನೊಂದಿಗೆ ಷಾಮಿಲ್ಲಾಗಿ ಏಕಾಏಕಿ ತನ್ನ ಎರಡು ಮಕ್ಕಳನ್ನು ಕೊಲೆ ಮಾಡಿ ಇದೀಗ ಪೊಲೀಸರ ವಶದಲ್ಲಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ;

ತನ್ನ ಎರಡು ಮಕ್ಕಳೊಂದಿಗೆ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮಹಿಳೆ ಅ.1 ರಂದು ತನ್ನ ಒಂದು ಮಗು ಸಾವನ್ನಪ್ಪಿದೆ ಎಂದು ಸಮೀಪದ ಸ್ಮಶಾನಕ್ಕೆ ತೆರಳಿ ಪ್ರಿಯಕರನೊಂದಿಗೆ ಮಣ್ಣು ಮಾಡಿ ಬಂದಿದ್ದಳು. ಮತ್ತೆ ಅ.7 ರಂದು ನನ್ನ ಇನ್ನೊಂದು ಮಗುವೂ ಸಾವನ್ನಪ್ಪಿದೆ ಎಂದು ಅದೇ ಸ್ಮಶಾನಕ್ಕೆ ತೆರಳಿ ಅಂತ್ಯ ಸಂಸ್ಕಾರ ನೆರವೇರಿಸಲು ಮುಂದಾಗಿದ್ದರು. ಒಂದು ಮಗು ಸತ್ತ ಒಂದು ವಾರದೊಳಗೆ ಮತ್ತೊಂದು ಮಗು ಮೃತಪಟ್ಟಿದೆ ಎಂಬ ಮಾತಿನಿಂದ ಅನುಮಾನಗೊಂಡ ಸ್ಮಶಾನದ ಕಾವಲುಗಾರ ಮಗು ಹಾಗೂ ತಾಯಿ ಹಾಗೂ ಪ್ರಿಯಕರನ ಪೋಟೋ ತೆಗೆದುಕೊಂಡು ಐಜೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆ ಮಹಾತಾಯಿ ತನ್ನ ಎರಡು ಮಕ್ಕಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಕಾನೂನು ಪ್ರಕ್ರಿಯೆ ನಂತರ ಹೆತ್ತ ತಾಯಿಯಿಂದಲೆ ಹತರಾದ ಮಕ್ಕಳ ಶವ ಹೊರ ತೆಗೆದು ಪರೀಕ್ಷೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!