ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ ವೇಳೆ 12 ಅಭ್ಯರ್ಥಿಗಳ ಸಾವಿಗೆ ಫಿಟ್ನೆಸ್ ತಜ್ಞರು ಹೇಳಿದ್ದೇನು?

Views: 351
ರಾಂಚಿ: ಜಾರ್ಖಂಡ್ನಲ್ಲಿ ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆದ ದೈಹಿಕ ಪರೀಕ್ಷೆ ವೇಳೆ 12 ಅಭ್ಯರ್ಥಿಗಳು ಸಾವನ್ನಪ್ಪಿದ್ದಾರೆ. 500 ಕ್ಕೂ ಹೆಚ್ಚು ಅಭ್ಯರ್ಥಿಗಳು ಅಸ್ವಸ್ಥಗೊಂಡಿದ್ದು, 100ಕ್ಕೂ ಹೆಚ್ಚು ಅಭ್ಯರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಜಾರ್ಖಂಡ್ ಪೊಲೀಸ್ ನೇಮಕಾತಿಯ ಓಟದ ದೂರ ಅದಕ್ಕೆ ನಿಗದಿಪಡಿಸಿದ ಸಮಯ ಅತಿ ಕಡಿಮೆ ಇದೆ. ಆಕಾಂಕ್ಷಿಗಳ ಸಾವಿಗೆ ಇದೇ ಕಾರಣ ಎನ್ನುತ್ತಾರೆ ವೈದ್ಯರು ಮತ್ತು ಫಿಟ್ನೆಸ್ ತಜ್ಞರು.
ಕಳೆದ ಆಗಸ್ಟ್ 22 ರಿಂದ ಅಬಕಾರಿ ಕಾನ್ಸ್ಟೇಬಲ್ಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ 12 ಜನರು ಸಾವನ್ನಪ್ಪಿದ್ದಾರೆ. ಆಕಾಂಕ್ಷಿಗಳ ಸಾವಿಗೆ ನೇಮಕಾತಿ ಪರೀಕ್ಷೆಯಲ್ಲಿನ ನಿಯಮಾವಳಿಗಳೇ ಕಾರಣ ಎನ್ನಲಾಗ್ತಿದೆ. ಅತಿ ಕಡಿಮೆ ಅವಧಿಯಲ್ಲಿ 10 ಕಿಮೀ ಓಡಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗ್ತಿದೆ.
ಉತ್ತರ ಪ್ರದೇಶ ಪೊಲೀಸ್ ನೇಮಕಾತಿಯಲ್ಲಿ 25 ನಿಮಿಷದಲ್ಲಿ ಕೇವಲ 4.8 ಕಿಮೀ ಓಡಬೇಕು. ಬಿಹಾರದಲ್ಲಿ 6 ನಿಮಿಷಗಳಲ್ಲಿ 1.6 ಕಿಮೀ ಓಡುವ ನಿಯಮವಿದೆ. ರಾಜಸ್ಥಾನದಲ್ಲಿ 5 ಕಿಮೀ ಓಡಲು 25 ನಿಮಿಷ ನಿಗದಿಪಡಿಸಲಾಗುತ್ತದೆ. ಆದರೆ ಜಾರ್ಖಂಡ್ನಲ್ಲಿ 10 ಕಿಮೀ ಓಟಕ್ಕೆ 60 ನಿಮಿಷ ಕಾಲಾವಕಾಶವಿದೆ. ಇದು ಅಭ್ಯರ್ಥಿಗಳ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಅಭ್ಯರ್ಥಿಗಳ ಸಾವಿಗೆ ಮತ್ತೊಂದು ಕಾರಣ, ಅಂದರೆ ಓಟದ ಸಮಯ ಬೆಳಗ್ಗೆ 5 ಗಂಟೆಗೆ ನಿಗದಿಯಾಗಿತ್ತು. ಆದರೆ ಆರಂಭವಾಗಿದ್ದು ಬೆಳಗ್ಗೆ 11 ಗಂಟೆಗೆ. ಆ ವೇಳೆ ಬಿಸಿಲಿನಲ್ಲಿ 10 ಕಿಮೀ ಓಡುವಾಗ ನಿತ್ರಾಣಗೊಂಡಿದ್ದಾರೆ. ಇದು ಅಭ್ಯರ್ಥಿಗಳ ಸಾವಿಗೆ ಪ್ರಮುಖ ಕಾರಣ ಅಂತಾರೆ ಫಿಟ್ನೆಸ್ ತಜ್ಞರು.








