ಅಪಘಾತದಲ್ಲಿ ಸಾವನ್ನಪ್ಪಿದ ಮಗಳ ಅಂಗಾಂಗ 6 ಮಕ್ಕಳಿಗೆ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು!

Views: 96
ತುಮಕೂರು: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಶಾಲಾ ಬಾಲಕಿಯ ಅಂಗಾಂಗವನ್ನು ಪೋಷಕರು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ನಗರದ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ ಚಂದನ ಜು.23ರಂದು ಶಾಲೆ ಮುಗಿಸಿ ವಾಪಸ್ ಮನೆಗೆ ಬರುವಾಗ ಅಪಘಾತ ಸಂಭವಿಸಿತ್ತು. ಲಾರಿ ಡಿಕ್ಕಿ ಹೊಡೆದು ಚಂದನ ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದನ ಕೊನೆಯುಸಿರೆಳೆದಿದ್ದಳು. ಕೊನೆಗೆ ಅವಳ ಅಂಗಾಂಗವನ್ನು ದಾನ ಮಾಡಲು ಹೆತ್ತವರು ಒಪ್ಪಿದ್ದಾರೆ. ಪೋಷಕರ ನಿರ್ಧಾರಕ್ಕೆ ಗೌರವ ಸಲ್ಲಿಸಿದ ಆಸ್ಪತ್ರೆ ಸಿಬ್ಬಂದಿ ಚಂದನಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಿದ್ದಾರೆ.
ಅದಕ್ಕೂ ಮೊದಲು ತಿಪಟೂರು ನಗರದ ಹಾಸನ ವೃತ್ತದಿಂದ ಹಳೆಪಾಳ್ಯದ ಸ್ವಗೃಹದವರೆಗೂ ಸರ್ಕಾರಿ ಗೌರವಗಳೊಂದಿಗೆ ಮತ್ತು ವಿವಿಧ ಶಾಲಾ ಮತ್ತು ಸಂಘ-ಸಂಸ್ಥೆಗಳಿಂದ ಗೌರವ ಸಮರ್ಪಣೆಗಳೊಂದಿಗೆ ಮೆರವಣಿಗೆಯ ಮೂಲಕ ಮೃತದೇಹವನ್ನು ಸಾಗಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಚಂದನಳ ಆತ್ಮಕ್ಕೆ ಶಾಂತಿ ಕೋರಿದರು.






