ಮರಕುಂಬಿ ಪ್ರಕರಣ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಜಾಮೀನು

Views: 138
ಕನ್ನಡ ಕರಾವಳಿ ಸುದ್ದಿ: ಬರೋಬ್ಬರಿ 10 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೊಪ್ಪಳ ಸೆಷನ್ಸ್ ಕೋರ್ಟ್ 99 ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿತ್ತು. ಈ ಕೇಸ್ಗೆ ಸದ್ಯ ಹೊಸ ಟ್ವಿಸ್ಟ್ ಸಿಕ್ಕಿದೆ. ಧಾರವಾಡ ಕೋರ್ಟ್ 97 ಮಂದಿಗೆ ಜಾಮೀನು ಮಂಜೂರು ಮಾಡಿದೆ.
ಜಾತಿ ನಿಂದನೆ ಕೇಸ್ನಲ್ಲಿ ಜೀವಾವಧಿ ಶಿಕ್ಷೆ ನೀಡಿದ್ದ ಸೆಷನ್ ಕೋರ್ಟ್ ಆದೇಶ ಪ್ರಶ್ನಿಸಿ ಧಾರವಾಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಎ1 ಆರೋಪಿಯನ್ನ ಬಿಟ್ಟು ಉಳಿದೆಲ್ಲಾ 97 ಮಂದಿಗೆ ನ್ಯಾಯಾಲಯ ಜಾಮೀನಿನ ಭಾಗ್ಯ ಕರುಣಿಸಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರ ಪರವಾಗಿ ವಕೀಲ ಆನಂದ ಕೊಳ್ಳಿ ಅವರು ವಾದ ಮಂಡಿಸಿದ್ದರು. ಹೈಕೋರ್ಟ್ ಆದೇಶದ ಬಳಿಕ ಮಾತನಾಡಿದ ವಕೀಲರು ಜಾತಿನಿಂದನೆ ಕೇಸ್ ಮೇಲೆ ಜೀವಾವಧಿ ಶಿಕ್ಷೆ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದೆವು. ಈ ಬಗ್ಗೆ ಹೈಕೋರ್ಟ್ ಸಮಗ್ರ ವಿಚಾರಣೆ ಮಾಡಿದೆ. ಜಾಮೀನಿನಲ್ಲಿ ಇದ್ದಾಗ ಹೇಗೆ ವರ್ತಿಸಿದ್ದರು ಎಂಬುದನ್ನು ಪರಿಗಣಿಸಿದ್ದಾರೆ. ಜಾಮೀನು ಷರತ್ತು ಉಲ್ಲಂಘಿಸಿದ್ದರಾ? ಈ ಎಲ್ಲ ವಿಷಯ ಗಣನೆಗೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಲಾಗಿದೆ.
ಪ್ರಕರಣದಲ್ಲಿ ಅನೇಕ ಲೋಪಗಳು ಕಂಡು ಬಂದಿವೆ. ಕೇಸ್ ಗುರುತು ಪತ್ತೆ ಪರೇಡ್ ಆಗಿರಲಿಲ್ಲ. ಅದೇ ಲೋಪ ಪ್ರಮುಖವಾಗಿ ಕಂಡು ಬಂದಿತ್ತು. ಮರಕುಂಬಿಯ ಚಿತ್ರಮಂದಿರದಲ್ಲಿ ಮಧ್ಯಾಹ್ನ 12ಕ್ಕೆ ಗಲಾಟೆ ಆಗಿತ್ತು. ಬಳಿಕ ಸಂಜೆ 4ಕ್ಕೆ ಅವರ ಏರಿಯಾಗೆ ಬಂದು ದಾಳಿ ಮಾಡಿದ್ದರು ಎನ್ನಲಾಗಿದೆ. ಆದರೆ ಎಫ್ಐಆರ್ ಆಗಿದ್ದು ಮಧ್ಯರಾತ್ರಿ 12ಕ್ಕೆ.ಘಟನೆ ನಡೆದ ಸಂಜೆ ಅಲ್ಲಿ ಪೊಲೀಸ್ ಇದ್ದರು ಎಂದೂ ಹೇಳಲಾಗಿದೆ. ಹಾಗಾದರೆ ಯಾಕೆ ಸ್ವಯಂಪ್ರೇರಿತ ದೂರು ದಾಖಲಾಗಿರಲಿಲ್ಲ. ಸ್ವಯಂ ಪ್ರೇರಿತ ದೂರು ದಾಖಲು ಯಾಕೆ ಆಗಿಲ್ಲ ಎಂಬ ಪ್ರಶ್ನೆಯೂ ವಿಚಾರಣೆಯಲ್ಲಿ ಬಂತು. ಇದನ್ನೆಲ್ಲ ನೋಡಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಜಾಮೀನು ಮಂಜೂರು ಆಗಿದೆ ಎಂದು ವಕೀಲ ಆನಂದ ಕೊಳ್ಳಿ ಅವರು ತಿಳಿಸಿದ್ದಾರೆ.
ಏನಿದು ಮರಕುಂಬಿ ಘಟನೆ?
ಆಗಸ್ಟ್ 28, 2014ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಗಲಭೆ ನಡೆದಿತ್ತು. ದಲಿತರ ಮೇಲೆ ಹಲ್ಲೆ, ಮನೆಗಳ ಧ್ವಂಸ ಹಾಗೂ ದೌರ್ಜನ್ಯ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಈ ಗಲಾಟೆ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.