ಕರಾವಳಿ ಸೇರಿದಂತೆ ಈ ಜಿಲ್ಲೆಗಳಿಗೆ ಏ.21ರಿಂದ ಏ.27ವರೆಗೆ ಬಿಸಿಗಾಳಿ ಎಚ್ಚರಿಕೆ
Views: 78
ಕನ್ನಡ ಕರಾವಳಿ ಸುದ್ದಿ: ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಕಲಬರಗಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಯಾದಗಿರಿ, ಚಿತ್ರದುರ್ಗ, ಗದಗ, ಬೀದರ್ನಲ್ಲಿ ವಾಡಿಕೆಗಿಂತ 3-4 ಡಿ.ಸೆ.ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏ.21ರಿಂದ ಏ.27ವರೆಗೆ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ ಕೊಟ್ಟಿದೆ.
ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಸೋಮವಾರ ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಉಷ್ಣಾಂಶ ದಾಟಿದೆ. ರಾಜ್ಯದ ಇತರ ಜಿಲ್ಲೆಗಳಿಗಿಂತ ಕಲಬುರಗಿಯಲ್ಲಿ 41.7 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನದಲ್ಲಿ 35-37ಡಿ.ಸೆ. ಉಷ್ಣಾಂಶ ಕಂಡುಬಂದಿದ್ದು, ವಾಡಿಕೆಗಿಂತ 1-2 ಡಿ.ಸೆ.ಉಷ್ಣಾಂಶ ಜಾಸ್ತಿಯಾಗಿದೆ. ತೇವಾಂಶ ಭರಿತ ಮೋಡ, ಮಳೆ ಮುನ್ಸೂಚನೆ ಇಲ್ಲದಿರುವುದು ಮತ್ತು ತಿಳಿ ವಾತಾವರಣ ಸೇರಿ ಇತರ ಕಾರಣಗಳಿಂದ ಬಿಸಿಲು ಜಾಸ್ತಿಯಾಗಿದೆ ಎನ್ನುತ್ತಾರೆ ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ
ರಾಜ್ಯದಲ್ಲಿ ಮುಂದಿನ 7 ದಿನ ಹವಾಮಾನ ಹೇಗಿರಲಿದೆ ಎಂಬುದರ ಬಗ್ಗೆ ಮುನ್ಸೂಚನೆ ನೀಡುತ್ತಿರುವ ಇಲಾಖೆ, ಪ್ರತಿನಿತ್ಯ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹೇಳುತ್ತಿದೆ. ಆದರೆ, ಒಂದೆರೆಡು ಪ್ರದೇಶ ಹೊರತುಪಡಿಸಿ ಉಳಿದೆಡೆ ಮಳೆ ಬೀಳುತ್ತಿಲ್ಲ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಅಥವಾ ವಾಯುಭಾರ ಕುಸಿತ ಸೃಷ್ಟಿಯಾಗದಿರುವುದು ಮತ್ತು ತೇವಾಂಶ ಭರಿತ ಮೋಡ ಇಲ್ಲದಿರುವ ಕಾರಣ ಮಳೆ ಬರುತ್ತಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.






