ಸುಜಾತಾ ಭಟ್ ಅವರಿಗೆ ರಕ್ಷಣೆ ನೀಡಿ: ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಎಸ್ಐಟಿಗೆ ಪತ್ರ

Views: 36
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಕೇಸ್ ಬಗ್ಗೆ ಎಸ್ಐಟಿ ತನಿಖೆ ಮುಂದುವರೆದಿದೆ. ಚಿನ್ನಯ್ಯ ಬಂಧಿಸಿದ ಮೇಲೆ ತನಿಖೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸುಜಾತಾ ಭಟ್ ವಿಚಾರದ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.
ಯೂಟ್ಯೂಬ್ ನಲ್ಲಿ ಸುಜಾತಾ ಭಟ್ ನೀಡಿದ್ದ ಹೇಳಿಕೆ ದೊಡ್ಡ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೆ, ಮತ್ತೆ ಮಾಧ್ಯಮಗಳ ಮುಂದೆ ಬಂದ ಸುಜಾತಾ ಭಟ್, ಸ್ಫೋಟಕ ಆರೋಪ ಮಾಡಿದರು. ನನಗೆ ಸಹಾಯ ಮಾಡುತ್ತೇವೆ ಅಂತಾ ಹೇಳಿ, ನನ್ನ ಮೇಲೆ ರೌಡಿಸಂ ಮಾಡಿ ಆ ರೀತಿ ಹೇಳಿಕೆ ಕೊಡಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಎಸ್ಐಟಿಗೆ ಪತ್ರವೊಂದನ್ನು ಬರೆದಿದ್ದಾರೆ. ಮುಖ್ಯಸ್ಥರು, ವಿಶೇಷ ತನಿಖಾ ತಂಡ ಸಿಐಡಿ ಕಛೇರಿ ಅವರಿಗೆ ಬರೆದಿರುವ ಪತ್ರದಲ್ಲಿ ಶ್ರೀಮತಿ ಸುಜಾತಾ ಭಟ್ ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಬಗ್ಗೆ ಮನವಿ ಮಾಡಲಾಗಿದೆ.
ಈ ಕುರಿತು ಡಾ. ನಾಗಲಕ್ಷ್ಮೀ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಎಸ್ಐಟಿ ರಚನೆಯಾಗಿ ಧರ್ಮಸ್ಥಳ ವಿಚಾರವಾಗಿ ತನಿಖೆ ನಡೆಯುತ್ತಿರುವ ವೇಳೆ ಸುಜಾತಾ ಭಟ್ ಅವರ ಮೇಲಾಗುತ್ತಿರುವ ಮಾನಸಿಕ ಕಿರುಕುಳವು ಮಿತಿಮೀರಿದೆ. ಸತ್ಯಾಸತ್ಯತೆಗಳು ತನಿಖೆಯಿಂದ ಹೊರಬರಬೇಕೇ ಹೊರತು, ಮಹಿಳೆಯ ತೇಜೋವಧೆಯಿಂದಲ್ಲ ಎಂದು ಹೇಳಿದ್ದಾರೆ
ಪತ್ರದ ವಿವರಗಳು: ಡಾ. ನಾಗಲಕ್ಷ್ಮೀ ಚೌಧರಿ ಅವರು ಪತ್ರದಲ್ಲಿ ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪತ್ರವನ್ನು ಪರಿಗಣಿಸುವ ಮೂಲಕ, ಧರ್ಮಸ್ಥಳದ ನಾಪತ್ತೆ, ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರವು ತಮ್ಮ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಎಸ್ಐಟಿ ರಚನೆಗಾಗಿ ಉಲ್ಲೇಖ ಮಾಡಲಾದ ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರರಾದ ಶ್ರೀಮತಿ ಸುಜಾತಾ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುವುದು, ಅವರನ್ನು ತೇಜೋವಧೆ ಮಾಡಿ ಹೀಯಾಳಿಸಿ ಸುದ್ದಿ ಮಾಡುವುದು, ತಡ ರಾತ್ರಿಯಲ್ಲಿ ಅವರ ಮನೆಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡುವುದು, ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿರುವುದನ್ನು ರಾಜ್ಯ ಮಹಿಳಾ ಆಯೋಗವು ಗಮನಿಸಿರುತ್ತದೆ.
ಮಹಿಳೆಯರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡಕ್ಕೆ ಮಹಿಳೆಯರು, ಸಂತ್ರಸ್ಥರು, ನಿರ್ಭೀತಿಯಿಂದ ದೂರನ್ನು ನೀಡಲು ಅವಕಾಶ ಮಾಡಿಕೊಟ್ಟು, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡುವಂತೆ ರಾಜ್ಯ ಮಹಿಳಾ ಆಯೋಗವು ಒತ್ತಾಯಿಸುತ್ತದೆ.
ಈ ಪ್ರಕರಣದ ದೂರುದಾರರಾದ ಶ್ರೀಮತಿ ಸುಜಾತಾ ಭಟ್ರವರು ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿರುತ್ತದೆ. ಸದರಿ ವಿಷಯವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ತಾವು ಕೂಡಲೇ, ವಿಶೇಷ ತನಿಖಾ ತಂಡದಿಂದ ಶ್ರೀಮತಿ ಸುಜಾತಾ ಭಟ್, ಇವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅವರು, ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ತುರ್ತಾಗಿ ಕಳುಹಿಸಿಕೊಡುವಂತೆ ಕೋರಿದೆ ಎಂದು ಹೇಳಿದ್ದಾರೆ.