ಆರೋಗ್ಯ

ಮಂಗಳೂರು ಜಿಲ್ಲಾಸ್ಪತ್ರೆ ವೆಲ್ಲಾಕ್‌ನಲ್ಲಿ ಮೊದಲ ಬಾರಿಗೆ  ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಹೃದ್ರೋಗ ಚಿಕಿತ್ಸೆ 

Views: 43

ಕನ್ನಡ ಕರಾವಳಿ ಸುದ್ದಿ:ಜಿಲ್ಲಾಸ್ಪತ್ರೆ ವೆಲ್ಲಾಕ್‌ನ 175 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹೃದ್ರೋಗ ಚಿಕಿತ್ಸೆ ಬಿಪಿಎಲ್‌ ಕಾರ್ಡ್‌ದಾರರಿಗೆ 8 ರೀತಿಯ ಹೃದ್ರೋಗ ಚಿಕಿತ್ಸೆಗಳು ಉಚಿತ, ಆಂಜಿಯೋಗ್ರಾಂಗೆ 5,000 ರೂ. ಶುಲ್ಕ ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದಲ್ಲಿ ಆಂಜಿಯೋಗ್ರಾಂ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳು ಆರಂಭ

ಬೆಂಗಳೂರಿನ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಬಳಿಕ ಪ್ರಥಮ ಬಾರಿಗೆ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಹಾಕ್ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭಿಸಿದ್ದು, ಶುಕ್ರವಾರ ತನಕ 9 ಮಂದಿ ಚಿಕಿತ್ಸೆ ಪಡೆದಿದ್ದಾರೆ.ವೆಸ್ಲಾಕ್ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್‌ನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್ ನಿರ್ಮಿಸಿ, ತಜ್ಞ ವೈದ್ಯರು, ನರ್ಸಿಂಗ್ ಸಿಬ್ಬಂದಿ, ತಂತ್ರಜ್ಞರ ನೇಮಕ ಮಾಡಿದ್ದು. ಸ್ಟಂಟ್‌ ಮತ್ತಿತರ ಔಷಧಗಳನ್ನು ಸರಕಾರ ಪೂರೈಕೆ ಮಾಡುತ್ತದೆ.

ವೆಸ್ಲಾಕ್ ಆಸ್ಪತ್ರೆಯ 175 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹೃದ್ರೋಗ ಚಿಕಿತ್ಸೆಗೆ ಚಾಲನೆ ನೀಡಲಾಗಿದೆ. ಹೊಸ ವ್ಯವಸ್ಥೆಯನ್ನು ಸೆ.21ರಂದು ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಉದ್ಘಾಟಿಸಿದ್ದು, ಸೆ.29ರಂದು ಪ್ರಥಮ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಮಾಡಲಾಗಿತ್ತು. ಅ.3ರ ತನಕ ಒಟ್ಟು 4 ಆಂಜಿಯೊಗ್ರಾಂ ಮತ್ತು 5 ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ.

ಸರಕಾರದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆ ಮೂಲಕ ಚಿಕಿತ್ಸೆ ನಡೆಯುತ್ತಿದೆ.ಬಿಪಿಎಲ್‌ ಕಾರ್ಡ್‌ದಾರರಿಗೆ ಲಭ್ಯ 8 ಚಿಕಿತ್ಸೆಗಳೂ ಉಚಿತವಾಗಿದ್ದು, ಆಂಜಿಯೋಗ್ರಾಂಗೆ ಮಾತ್ರ ಎಬಿಆರ್‌ಕೆಯಲ್ಲಿ ಯಾವುದೇ ಕೋಡ್ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರೂ 5 ಸಾವಿರ ರೂ. ಪಾವತಿ ಮಾಡಬೇಕಾಗುತ್ತದೆ.

ಎಪಿಎಲ್ ಕಾರ್ಡ್‌ದಾರರಿಗೆ ಸರಕಾರದ ಎಬಿಎಆರ್‌ಕೆ ಮಂಜೂರಾತಿ ಮೊತ್ತ ನಿಗದಿಪಡಿಸಲಾಗಿದೆ. ಆಯುಷ್ಮಾನ್ ಕಾರ್ಡ್ ಮಾಡಿಸಿದವರಿಗೆ ಶೇ. 30 ರಿಯಾಯಿತಿ ಮೂಲಕ ಶೇ. 70 ಮೊತ್ತ ಪಾವತಿಸಬೇಕು. ಚಿಕಿತ್ಸೆಯು ಎಬಿಎಆರ್‌ಕೆಯನ್ನೇ ಆಶ್ರಯಿಸಿರುವುರಿಂದ ಮೊತ್ತ ಪಾವತಿ ಅನಿವಾರ್ಯ. ವರ್ಷಕ್ಕೆ 10-15 ಕೋಟಿ ರೂ. ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದ ತಂಡ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡುತ್ತಿದ್ದು. ಮುಂದೆ ಪೇಸ್‌ಮೇಕ‌ರ್, ಬೈನ್‌ ಆಂಜಿಯೋಗ್ರಾಂ, ಮಕ್ಕಳ ಹೃದಯ ರಂಧ್ರ ಶಸ್ತ್ರಚಿಕಿತ್ಸೆಗೆ ಎಎಸ್‌ಡಿ ಮತ್ತು ವಿಎಸ್‌ಡಿ ಮೊದಲಾದ ಚಿಕಿತ್ಸೆ ಲಭಿಸಲಿದೆ.

ಸೀಮಿತ ಸಿಬ್ಬಂದಿ, ನಿಯಮಿತ ಸೌಲಭ್ಯ ಮೂಲಕ ಕ್ಯಾಥ್‌ಲ್ಯಾನ್‌ ಆರಂಭಗೊಂಡಿದೆ. ಮೂವರು ತಜ್ಞ ವೈದ್ಯರಿದ್ದು. ನಿಯಮಿತ ಅವಧಿಯ ಸೇವೆ ನೀಡಲಿದ್ದಾರೆ. ಸರಕಾರಿ ರಜೆ ಇದ್ದರೆ ಆರೋಗ್ಯ ಮಿತ್ರರು ಇರುವುದಿಲ್ಲ. ಶಸ್ತ್ರಚಿಕಿತ್ಸೆ ನಡೆದು, 21 ಗಂಟೆಯೊಳಗೆ ಎಬಿಆರ್‌ಕೆಗೆ ದಾಖಲೆ ಅಪ್‌ಲೋಡ್ ಮಾಡದಿದ್ದರೆ, ಉಚಿತ ಸೌಲಭ್ಯ ಮಂಜೂರಾಗುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕಿದೆ.

ವೆಸ್ಲಾಕ್ ಆಸ್ಪತ್ರೆಯ 175 ವರ್ಷಗಳ ಇತಿಹಾಸದಲ್ಲಿಮೊದಲ ಬಾರಿಗೆ ಕ್ಯಾಥ್‌ಲ್ಯಾಬ್ ಸ್ಥಾಪಿಸಿ, ಹೃದ್ರೋಗ ಚಿಕಿತ್ಸೆ ಆರಂಭಿಸಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಎಲ್ಲವೂ ಉಚಿತ. ಆಂಜಿಯೋಗ್ರಾಂಗೆ ಎಬಿಆರ್‌ಕೆಯಲ್ಲಿ ಕೋಡ್ ಇಲ್ಲದೆ 5 ಸಾವಿರ ರೂ. ಪಾವತಿ ಮಾಡಬೇಕಾಗುತ್ತದೆ. ಕೋಡ್ ನೀಡಲು ಸರಕಾರದ ಮಟ್ಟದಲ್ಲಿ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕ್ಯಾಥ್‌ಲ್ಯಾಬ್‌ ಉದ್ಘಾಟನೆ ಬಳಿಕ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಚಿಕಿತ್ಸೆ ಆರಂಭಿಸಿದ್ದು, ಬಡ, ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಿದೆ. ಎಪಿಎಲ್ ಕಾರ್ಡ್‌ದಾರರಿಗೂ ಆಯುಷ್ಮಾನ್ ಯೋಜನೆ ಮೂಲಕ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿದೆ ಎಂದು ವೆಸ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ಶಿವಪ್ರಕಾಶ್‌ ಡಿ.ಎಸ್‌. ಹೇಳಿದ್ದಾರೆ.

ಅತ್ಯಂತ ಬಡ ಕುಟುಂಬದ ಸೋಮಯ್ಯ ಎಂಬವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದೇವೆ. ಈಗ ಹೊಸ ವ್ಯವಸ್ಥೆ. ನಮಗೆ ಸುರಕ್ಷೆ, ಗುಣಮಟ್ಟ ಮತ್ತು ರೋಗಿಯ ಸಂತೃಪ್ತಿ ಮುಖ್ಯ. 8 ಐಸಿಯು, 20 ಕಾರ್ಡಿಯಾಕ್ ಬೆಡ್‌ಗಳಿವೆ. ಕ್ಲಪ್ತ ಸಮಯದಲ್ಲಿ ಉಪಕರಣಗಳ ಪೂರೈಕೆ ಆಗಬೇಕು. ಬಡವರಿಗೆ ತುಂಬಾ ಅನುಕೂಲವಾಗಲಿದೆ ಎಂದು ಕ್ಯಾಥ್‌ಲ್ಯಾಬ್ ಮುಖ್ಯಸ್ಥ ಡಾ. ನರಸಿಂಹ ಪೈ ಹೇಳಿದ್ದಾರೆ.

ವೆಸ್ಲಾಕ್‌ನಲ್ಲಿ ಎಪಿಎಲ್‌ಗೆ ಹೃದ್ರೋಗ ಚಿಕಿತ್ಸೆ ಮೊತ್ತ (ಶೇ.30 ರಿಯಾಯಿತಿ ದರ)

ಆಂಜಿಯೋಗ್ರಾಂ ಸಹಿತ ಸಿಂಗಲ್ ಸ್ಟಂಟ್: 42,000 ರೂ.

ಆಂಜಿಯೋಗ್ರಾಂ ಸಹಿತ ಡಬಲ್ ಸ್ಟಂಟ್: 59,500 ರೂ.

ಪಿಟಿಸಿಎ ಹೆಚ್ಚುವರಿ ಸ್ಟಂಟ್: 20,194 ರೂ.

ತುರ್ತು, ಆಂಜಿಯೋಗ್ರಾಂ ಸಹಿತ: 42,000 ರೂ.

2 ಡ್ರಗ್ ಎಲ್ಯೂಟಿಂಗ್ ಸ್ಟಂಟ್: 59,500 ರೂ.

ಥಂಬೋಲಿಸಿಸ್ ಸಹಿತ ಕವಾಟ: 7,000 ರೂ.

ತಾತ್ಕಾಲಿಕ ಪೇಸ್ ಮೇಕರ್: 7,000 ರೂ.

ಆಂಜಿಯೋಗ್ರಾಂ: 7,000 ರೂ.

Related Articles

Back to top button