ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡ ಕರ್ನಾಟಕದ ಈ ಮೂವರು

Views: 40
ಕನ್ನಡ ಕರಾವಳಿ ಸುದ್ದಿ :ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡವರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಒಟ್ಟು ಮೂವರು ಪ್ರಾಣ ಬಿಟ್ಟಿದ್ದು ಮೃತರಾದವರ ಕುಟುಂಬಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಲಾಗಿದೆ.
ಜಮ್ಮುಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಒಟ್ಟು 26 ಪ್ರವಾಸಿಗರು ಉಸಿರು ಚೆಲ್ಲಿದ್ದರು. ಇದರಲ್ಲಿ ಕರ್ನಾಟಕದವರಾದ ಮಂಜುನಾಥ್ ರಾವ್, ಭರತ್ ಭೂಷಣ್ ಹಾಗೂ ಮಧುಸೂದನ್ ರಾವ್ ಜೀವ ಬಿಟ್ಟಿದ್ದಾರೆ.ಈ ದಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದರು. ಇದರ ಬೆನ್ನಲ್ಲೇ ಮೃತರಾದವರ ಕುಟುಂಬಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.
ಶಿವಮೊಗ್ಗದ ಮಂಜುನಾಥ್ ಗುಂಡಿನ ದಾಳಿಯಿಂದ ಪ್ರಾಣ ಬಿಟ್ಟಿದ್ದಾರೆ. ಇವರು ಪ್ರವಾಸಕ್ಕೆಂದು ತಮ್ಮ ಕುಟುಂಬದ ಜೊತೆ ಜಮ್ಮುಕಾಶ್ಮೀರಕ್ಕೆ ಹೋಗಿದ್ದರು. ಪ್ರವಾಸದ ಖುಷಿಯಲ್ಲಿದ್ದ ಮಂಜುನಾಥ್ ಸೇರಿ ಕೆಲವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿ ಹಿನ್ನೆಲೆಯಲ್ಲಿ ಮಂಜುನಾಥ್ ಉಸಿರು ಚೆಲ್ಲಿದ್ದರು.
ಭರತ್ ಭೂಷಣ್ ಅವರು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಇನ್ನಿಲ್ಲವಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು ಆಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೂರು ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದರು. ಆದರೆ ಏಪ್ರಿಲ್ 22 ರಂದು ಉಗ್ರರು ನಡೆಸಿದ ಹೇಯ ಕೃತ್ಯದಿಂದ ಭರತ್ ಭೂಷಣ್ ಬಾರದ ಲೋಕಕ್ಕೆ ತೆರಳಿದ್ದಾರೆ.
ಮೂಲತಃ ಆಂಧ್ರದವರಾಗಿದ್ದ ಮಧುಸೂದನ್ ರಾವ್ ಬೆಂಗಳೂರಿನ ರಿಚಸ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆಷ್ಟೇ ಕುಟುಂಬದ ಜೊತೆ ಪ್ರವಾಸಕ್ಕೆ ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಭಯೋತ್ಪಾದಕರ ಏಕಾಏಕಿ ದಾಳಿಯಿಂದ ಮಧುಸೂದನ್ ರಾವ್ ಜೀವ ಕಳೆದುಕೊಂಡಿದ್ದಾರೆ.