ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಹಾವು ಕಚ್ಚಿ ವ್ಯಕ್ತಿ ಸಾವು

Views: 162
ಕನ್ನಡ ಕರಾವಳಿ ಸುದ್ದಿ: ಕ್ರಾಕ್ಸ್ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿದ ಪರಿಣಾಮ 41 ವರ್ಷದ ಮಂಜು ಪ್ರಕಾಶ್ ಎಂಬ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದಿದೆ.
ಮಂಜು ಪ್ರಕಾಶ್ ಅವರು ಮನೆಯಿಂದ ಹೊರಗೆ ಹೋಗಲು ಸಿದ್ಧರಾಗುತ್ತಿದ್ದಾಗ, ಮನೆಯ ಅಂಗಳದಲ್ಲಿ ಇಟ್ಟಿದ್ದ ಕ್ರಾಕ್ಸ್ ಚಪ್ಪಲಿಯನ್ನು ಧರಿಸಿದ್ದಾರೆ. ಆದರೆ, ಚಪ್ಪಲಿಯೊಳಗೆ ಕೊಳಕು ಮಂಡಲ ಹಾವು ಒಳನುಗ್ಗಿ ಅಡಗಿತ್ತು. ಇದನ್ನು ಗಮನಿಸದ ಮಂಜು, ಚಪ್ಪಲಿಯನ್ನು ಧರಿಸಿ ಹೊರಗೆ ಹೋಗಿ, ಕೆಲವೇ ಕ್ಷಣಗಳಲ್ಲಿ ಮನೆಗೆ ವಾಪಸ್ ಬಂದು ಮಲಗಿದ್ದಾರೆ. ಈ ವೇಳೆ ಹಾವು ಕಚ್ಚಿದ್ದರಿಂದ ದೇಹದಲ್ಲಿ ವಿಷ ಹರಡಿ, ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ಮಂಜು ಪ್ರಕಾಶ್ ಅವರು ಕಳೆದ ಕೆಲವು ವರ್ಷಗಳ ಹಿಂದೆ ಅಪಘಾತದಿಂದ ಕಾಲಿನ ಸ್ಪರ್ಶಶಕ್ತಿಯನ್ನು ಕಳೆದುಕೊಂಡಿದ್ದರು. ಹಾವು ಕಚ್ಚಿದ್ದು ಆ ಕಾಲಿಗೆ ಆಗಿರುವುದರಿಂದ, ಅವರಿಗೆ ಯಾವುದೇ ನೋವು ಗೊತ್ತಾಗಿಲ್ಲ. ಇದರಿಂದ ವಿಷ ದೇಹದಾದ್ಯಂತ ಹರಡುವವರೆಗೂ ಯಾವುದೇ ಚಿಹ್ನೆ ಕಾಣಿಸಿರಲಿಲ್ಲ. ನೆರೆಮನೆಯವರು ಚಪ್ಪಲಿಯೊಳಗೆ ಸತ್ತಿರುವ ಹಾವನ್ನು ಗಮನಿಸಿ, ಮನೆಯವರಿಗೆ ತಿಳಿಸಿದ್ದಾರೆ. ಆದರೆ, ಆಗಲೇ ಮಂಜು ಅವರು ಹಾಸಿಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಕೊನೆಯುಸಿರೆಳೆದಿದ್ದರು.
ಘಟನೆಯ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ.