ಕೊಳವೆ ಬಾವಿ ಮರುಪೂರಣ: ಮಳೆಗಾಲದ ನೀರನ್ನು ಭೂಗರ್ಭಕ್ಕೆ ಸೇರಿಸಿ ಅಂತರ್ಜಲ ವೃಧ್ಧಿಗೆ ಮಾದರಿಯಾದ ಸಾವಯವ ಕೃಷಿಕ ಅಶೋಕ ಶೆಟ್ಟಿಗಾರ

Views: 389
ಕುಂದಾಪುರ: ಹುಬ್ಬಳ್ಳಿಯಲ್ಲಿ ಉದ್ಯಮಿಯಾಗಿರುವ ಶ್ರೀ ಅಶೋಕ ಶೆಟ್ಟಿಗಾರ ಮತ್ತು ಕುಟುಂಬದವರು ಶುದ್ಧ ಪರಿಸರದ ವಾತಾವರಣ ಮತ್ತು ಉತ್ತಮ ಆರೋಗ್ಯಕ್ಕಾಗಿ ನಗರವನ್ನು ತೊರೆದು ಕುಂದಾಪುರ ತಾಲೂಕು ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಬಲಬಾಗದ ಹಿಂಬಾಗದಲ್ಲಿರುವ ವಕ್ವಾಡಿ ರಸ್ತೆಯ ಪಕ್ಕದಲ್ಲಿ 2 ಎಕರೆ ವಿಸ್ತೀರ್ಣದ ಗುಡ್ಡ ಪ್ರದೇಶದಲ್ಲಿ ವಾಸ್ತವ್ಯ ಮಾಡಿಕೊಂಡಿರುವ ಇವರು ಮನೆಯಂಗಳದಲ್ಲಿ 60 ಅಡಿ ಬಾವಿ ತೋಡಿಸಿ ನೀರಿನ ಅಭಾವ ಕಂಡಿದ್ದರು ಬಾವಿಯ ಪಕ್ಕದಲ್ಲಿ 630 ಅಡಿ ಆಳದ ಬೋರ್ ವೆಲ್ ತೋಡಿಸಿದ್ದರು. 8 ವರ್ಷದ ಹಿಂದೆ ಭೂ ತಜ್ಞ ದೇವರಾಜ ರೆಡ್ಡಿ ಅವರ ಸಲಹೆಯಿಂದ ನಂತರ ಅದರ ಸುತ್ತ ಮರುಪೂರಣದಿಂದ ಮಳೆಗಾಲದ ಪೂರ್ವದಲ್ಲಿ 25 ಅಡಿ ನೀರಿನ ಆಶ್ರಯ ಪಡೆದು ಗುಡ್ಡ ಪ್ರದೇಶದ ಕಡುಬಿಸಿಲಿನ ನಡುವೆಯೂ ತಂಪು ನೀಡುವ ಕೃಷಿ ಮತ್ತು ಹಸಿರಿನ ತೋಟ ಮನಸೆಳೆಯುತ್ತದೆ. ಇವರ ಮನೆಯ ಸುತ್ತಮುತ್ತಲಿನ ಪರಿಸರದವರು ಸಹ ಉತ್ತಮ ನೀರಿನ ಆಶ್ರಯ ಪಡೆದಿದ್ದಾರೆ.
ಈ ಹಿಂದೆ ಭರ್ಜರಿ ಯಶಸ್ಸು ಕಂಡ ಕೊಳವೆ ಬಾವಿ (ಅಶೋಕ ಶೆಟ್ಟಿಗಾರ ಮತ್ತು ಪತ್ನಿ ಜ್ಯೋತಿ ಲಕ್ಷ್ಮೀ )
ಮರುಪೂರಣದ ನಂತರ ನೀರಿಲ್ಲದ ಬಾವಿಯಲ್ಲಿ ದಿನೇ ದಿನ ನೀರಿನ ಮಟ್ಟ ಏರುತ್ತಿದ್ದು, ಬೇಸಿಗೆಯ ಕೊನೆಯಲ್ಲಿ 25 ಅಡಿ ನೀರು ನಿಂತಿದೆ. ಬೋರ್ ವೆಲ್ ನಲ್ಲಿಯೂ ನೀರು ತುಂಬಿ ತುಳುಕುತ್ತಿದೆ. ಭರಪೂರ ಜಲಧಾರೆಯಿಂದ ಭರ್ಜರಿ ಯಶಸ್ಸು ಕಂಡ ಅವರು ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ವಾಡಿ ಗ್ರಾಮದ ಗುರುಕುಲ ಪಬ್ಲಿಕ್ ಸ್ಕೂಲ್ ಹತ್ತಿರ ಬೆಳಾರ್ ಬೆಚ್ಚಾಡಿ ಎಂಬಲ್ಲಿ ತಮ್ಮದೆ ಆದ ತಂತ್ರಜ್ಞಾನದೊಂದಿಗೆ ಮಳೆಗಾಲದಲ್ಲಿ ಸುತ್ತಮುತ್ತಲಿನ ನೀರು ಪೊಲಾಗುವುದನ್ನು ತಡೆಗಟ್ಟಿ ಸಾಧ್ಯವಾದಷ್ಟು ನೀರನ್ನು ಭೂಗರ್ಭಕ್ಕೆ ಸೇರಿಸಿ ಅಂತರ್ಜಲ ವೃದ್ಧಿಯಾಗಲು ಕೊಳವೆ ಬಾವಿ ಮರುಪೂರಣ ಮಾದರಿ ಎನಿಸಿಕೊಂಡಿದೆ.
ಕೊಳವೆ ಭಾವಿ ಮರುಪೂರಣ ಹೇಗೆ?
ಒಂದು ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಸಂದರ್ಭದಲ್ಲಿ, ಆ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಬಂದಿರುವ ಕಲ್ಲಿನ ಪದರಗಳ ವಿವರ, ಬೋರ್ವೆಲ್ ಕೊರೆಯುವ ಆಳ ಕೇಸಿಂಗ್ ಪೈಪಿನ ವಿವರ ಇತ್ಯಾದಿ ಗಮನದಲ್ಲಿಟ್ಟುಕೊಂಡು ಇಂಗು ಗುಂಡಿ ನಿರ್ಮಿಸಬೇಕಾಗುತ್ತದೆ.
ಅಶೋಕ್ ಶೆಟ್ಟಿಗಾರರು ಈ ಗುಡ್ಡ ಪ್ರದೇಶದಲ್ಲಿ ತಮ್ಮ ಒಂದು ಎಕರೆ 25 ಸೆಂಟ್ಸ್ ಜಾಗದಲ್ಲಿ 280 ಫೀಟ್ ಬೋರ್ವೆಲ್ ಕೊರೆಯಿಸಿದ್ದಾರೆ ಇದರ ಸುತ್ತಲೂ 26 ಫೀಟ್ ಉದ್ದ 10 ಅಡಿ ಅಗಲ 10 ಫೀಟ್ ಎತ್ತರದ ಹೊಂಡ ತೆಗೆಯಲಾಗಿದ್ದು,ಈ ಜಾಗದ ಎಲ್ಲಾ ನೀರು ಹರಿದು ಬರುವಂತೆ 8 ಫೀಟ್ ಆಗಲ 6 ಅಡಿ ಉದ್ದ 10 ಫೀಟ್ ಅಡಿ ಎತ್ತರದ ಹೊಂಡ ತೆಗೆಯಲಾಗಿದ್ದು ಅದರಿಂದ ಆರು ಇಂಚಿನ ಮೂರು ಪಿವಿಸಿ ಪೈಪನ್ನು 5 ಫೀಟ್ ಎತ್ತರದಲ್ಲಿ ಕೊಳವೆ ಬಾವಿ ಹೊಂಡಕ್ಕೆ ಇಡಲಾಗಿದೆ.
ಇನ್ನೊಂದು ಬದಿಯಿಂದ ಗುಡ್ಡದಿಂದ ತೊಡಿನ ಮುಖಾಂತರ ಹರಿದು ಬರುವ ನೀರಿಗೆ 8 ಅಡಿ ಅಗಲ 10 ಅಡಿ ಉದ್ದದ 10 ಅಡಿ ಎತ್ತರದ ಹೊಂಡ ತೆಗೆದು ಅದಕ್ಕೆ ಎರಡು ಪಿವಿಸಿ ಪೈಪನ್ನು ಕೊಳವೆ ಬಾವಿ ಹೊಂಡಕ್ಕೆ ಮತ್ತು ಇನ್ನೊಂದು ಬದಿಯಿಂದ ಹರಿದು ಬರುವ ನೀರನ್ನು ಈ ಹೊಂಡಕ್ಕೆ ಬರುವಂತೆ ಒಂದು ಫೀಟ್ ಸುತ್ತಳತೆಯ ಪೈಪನ್ನು ಇಡಲಾಗಿದೆ.
ಕೊಳವೆ ಬಾವಿ ಮರುಪೂರಣಕ್ಕೆ ಬೇಕಾಗುವ ಸಾಮಗ್ರಿಗಳು
ಕೊಳವೆ ಬಾವಿ ಹೊಂಡದಲ್ಲಿ 18 ಇಂಚು ಬೊಡ್ರಸ್ ತಳಭಾಗದಲ್ಲಿ 120 ಸೆ.ಮೀ ಎತ್ತರ ತುಂಬಬೇಕು. ಇದರ ಮೇಲ್ಭಾಗದಲ್ಲಿ 40 mm ಬೊಡ್ರಸ್ 60 ಸೆ.ಮೀ ಎತ್ತರದಲ್ಲಿ 20 mm ಬೊಡ್ರಸ್ 60 ಸೆ.ಮೀ. ಎತ್ತರ ತುಂಬಬೇಕು.ಇದ್ದಿಲು 30 ಸೆ.ಮೀ ತುಂಬಬೇಕು. ಅದರ ಮೇಲೆ ನೈಲಾನ್ ಮೆಷ್ ಹಾಸಬೇಕು. ಇದರ ಮೇಲೆ 6mm ಸರಿಯಾಗಿ ತೊಳೆದ ಜಿಲ್ಲಿಯನ್ನು 30 ಸೆಂ.ಮೀ. ಎತ್ತರ ಹರಡಲಾಗಿದೆ. ಹೊಂಡದ ನಾಲ್ಕು ಕಡೆಗೆ ನೈಲಾನ್ ಮೇಷ್ ಹಾಕಲಾಗಿದೆ.
ಪೂರ್ಣ ಜಲ ಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಇಂಗು ಗುಂಡಿ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಸಿಮೆಂಟ್ ಕಾಂಕ್ರೀಟ್ನಿಂದ ಭದ್ರಗೊಳಿಸಿದರೆ ಇಂಗು ಗುಂಡಿಯಲ್ಲಿ ಮಳೆ ನೀರು ಹರಿದುಬರುವ ಸಂದರ್ಭದಲ್ಲಿ ನೀರು ನಿಲ್ಲುವುದಕ್ಕೆ ಅನುಕೂಲವಾಗುತ್ತದೆ.
ಇಂಗು ಗುಂಡಿಯ ಕೇಸಿಂಗ್ ಪೈಪ್ ಸುತ್ತಲೂ 150 ರಂಧ್ರಗಳನ್ನು ಕೊರೆಯಲಾಗಿದೆ.ಕೊಳವೆ ಬಾವಿ ಕೇಸಿಂಗ್ ಪೈಪಿಗೆ ಎರಡು ಹೊದಿಕೆಯ ಪ್ಲಾಸ್ಟಿಕ್ ಮೆಷ್ ಸುತ್ತಿ ಅದಕ್ಕೆ ತಾಮ್ರದ ವಯರ್ ನಿಂದ ಕಟ್ಟಲಾಗಿದೆ ಈ ಹೊಂಡದ ಬದಿಗೆ ಹೊರಗಿನ ಮಣ್ಣು ಬರದ ಹಾಗೆ ಮೆಷ್ ಹಾಕಲಾಗಿದೆ.
ಪೂರ್ಣ ಜಲ ಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಇಂಗು ಗುಂಡಿ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಸಿಮೆಂಟ್ ಕಾಂಕ್ರೀಟ್ನಿಂದ ಭದ್ರಗೊಳಿಸಿದರೆ ಇಂಗು ಗುಂಡಿಯಲ್ಲಿ ಮಳೆ ನೀರು ಹರಿದುಬರುವ ಸಂದರ್ಭದಲ್ಲಿ ನೀರು ನಿಲ್ಲುವುದಕ್ಕೆ ಅನುಕೂಲವಾಗುತ್ತದೆ.
ಸೋಸು ಗುಂಡಿ:ಮಳೆ ನೀರು ಹರಿದು ಬರುವಾಗ ಕಸ ಕಡ್ಡಿ ಮಣ್ಣು ಮಿಶ್ರಿತ ನೀರು ಹರಿದು ಬರುವುದರಿಂದ ಬರುವ ಮಳೆ ನೀರನ್ನು ಶೋಧಿಸಲು, ಸೋಸು ಗೂಂಡಿಗಳನ್ನು ನಿರ್ಮಿಸುವುದರಿಂದ ಮಾರ್ಗ ಮಧ್ಯದಲ್ಲಿ ನೀರಿನ ಹರಿವಿಗೆ ತಡೆಯೊಡ್ಡುವ ಕಸ ಕಡ್ಡಿ ಮಣ್ಣು ಮುಂತಾದ ತ್ಯಾಜ್ಯವಸ್ತುಗಳನ್ನು ಜಲ ಮರುಪೂರಣ ಇಂಗು ಗುಂಡಿಗೆ ಬರದ ಹಾಗೆ ತಡೆಹಿಡಿಯಬಹುದು.
ಇಂಗು ಗುಂಡಿಯನ್ನು ಈ ರೀತಿ ವಿನ್ಯಾಸಗೊಳಿಸುವುದರಿಂದ ಬಾವಿಯಲ್ಲಿ ತ್ವರಿತವಾಗಿ ಜಲ ಮರುಪೂರಣವಾಗುತ್ತದೆ. ಮಳೆ ಬರುವ ಸಂದರ್ಭದಲ್ಲಿ ಹರಿದು ಬರುವ ನೀರನ್ನು ಕಾಲುವೆ ಮೂಲಕ ಒಂದೇ ಮಾರ್ಗವಾಗಿ ತೊಟ್ಟಿಯಲ್ಲಿ ಶೇಖರಣೆಗೊಂಡಿರುವ ನೀರನ್ನು ನಿಧಾನವಾಗಿ ಶೋಧಿಸಿ ಬಿಡಬೇಕು. ಕೇಸಿಂಗ್ ಪೈಪ್ಗೆ ನೇರ ಸಂಪರ್ಕವಿರುವದರಿಂದ ನೀರು ಶೀಘ್ರದಲ್ಲಿ ಆಳ ಸೇರಿ ನೀರಿನ ಸೆಲೆಯನ್ನು ಸೇರಿಸಿ ಹೆಚ್ಚು ನೀರು ವೃದ್ಧಿಯಾಗಲು ಮಾಡುವುದರಿಂದ ಇನ್ನೂ ಹೆಚ್ಚು ನೀರು ಅಂತರ್ಜಲಕ್ಕೆ ಸೇರಿಸಲು ಅನುಕೂಲವಾಗುತ್ತದೆ.
ಮುಂದುವರಿದ ಬರ ಪರಿಸ್ಥಿತಿ ಮತ್ತು ಅಂತರ್ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂರಕ್ಷಣೆ ಈ ಹೊತ್ತಿನ ಅತ್ಯಗತ್ಯ ಕ್ರಮವಾಗಿದೆ ಭೂಮಿಯಲ್ಲಿ ಜಲ ಸಂರಕ್ಷಿಸಿ ಜಲಧಾರೆ ಹರಿದು ಬರುವಲ್ಲಿ ಅಶೋಕ್ ಶೆಟ್ಟಿಗಾರರು ಮಾದರಿಯಾಗಿದ್ದಾರೆ. ಇಂತಹ ಸಾರ್ವತ್ರಿಕ ಜಾಗೃತಿಯನ್ನು ಆಡಳಿತ ಸಂಸ್ಥೆಗಳು ಕ್ರಮ ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಬರಬಹುದಾದ ನೀರಿನ ಅಭಾವವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು ಎಂಬ ಅರಿವು ಮೂಡಿಸಬೇಕಾಗಿದೆ.
ವಿಳಾಸ: ಅಶೋಕ ಶೆಟ್ಟಿಗಾರ ‘ಗಣೇಶ್ ನಗರ’ ಬಡಾವಣೆ, ಕುಂಭಾಶಿ. ವಕ್ವಾಡಿ ರಸ್ತೆ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಸಂಪರ್ಕ:9035137899