ಅಮಾಸೆಬೈಲು: ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಕಳವಿಗೆ ಯತ್ನ; ಆರೋಪಿ ಬಂಧನ
Views: 556
ಕನ್ನಡ ಕರಾವಳಿ ಸುದ್ದಿ:ಅಮಾಸೆಬೈಲು ಶೇಡಿಮನೆ ಗ್ರಾಮದ ಅರಸಮ್ಮಕಾನು ಎಂಬಲ್ಲಿರುವ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಕಳವಿಗೆ ವಿಫಲ ಯತ್ನ ನಡೆಸಿದ ಆರೋಪಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ಜುಲೈ 28ರ ಮಧ್ಯರಾತ್ರಿ ನಡೆದಿದೆ.
ಕಾಣಿಕೆ ಹುಂಡಿ ಕಳವಿಗೆ ಯತ್ನಿಸಿದ ಆರೋಪಿಯನ್ನು ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಅರಸಮ್ಮಕಾನು ನಿವಾಸಿ ದಿ. ದಟ್ಟ ಎಂಬುವನ ಮಗ ಕೃಷ್ಣ (42) ಎಂದು ಗುರುತಿಸಲಾಗಿದೆ.
ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ನಾಗರಾಜ ಬಾಯರಿಯವರು ಜುಲೈ 28ರಂದು ಸಂಜೆ ದೇವಸ್ಥಾನದ ಪೂಜೆ ಮುಗಿಸಿ ಬಾಗಿಲನ್ನು ಭದ್ರಪಡಿಸಿ ಹೋಗಿದ್ದರು. ಮಾರನೇ ದಿನ ಜುಲೈ 29ರಂದು ಬೆಳಿಗ್ಗೆ ದೇವಸ್ಥಾನದ ಪೂಜೆಗೆ ಬಂದಾಗ ದೇವಸ್ಥಾನದ ಎದುರುಗಡೆ ಇರುವ ಕಾಣಿಕೆ ಹುಂಡಿಯನ್ನು ಯಾರೋ ಕಳ್ಳರು ಕಬ್ಬಿಣದ ಆಯುಧವನ್ನು ಬಳಸಿ ತೆರೆಯಲು ಪ್ರಯತ್ನಿಸಿರುವುದನ್ನು ಕಳವು ಮಾಡಲು ಯತ್ನಿಸಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ದೇವಸ್ಥಾನದ ಅಧ್ಯಕ್ಷ ಕೆ. ಮೋಹನದಾಸ್ ಹೆಗ್ಡೆಯವರಿಗೆ ತಿಳಿಸಿದ್ದು, ಬಳಿಕ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸೈ ಸುಧಾರಾಣಿ ಟಿ. ಅವರು ಸ್ಥಳೀಯ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿ ತನಿಖೆ ಕೈಗೆತ್ತಿಕೊಂಡಿದ್ದು, 24 ಗಂಟೆಗಳ ಒಳಗೆ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚುವಲ್ಲಿ ಹೆಡ್ ಕಾನ್ಸ್ಟೇಬಲ್ ನವೀನ್, ದಿನೇಶ್,ಕಾನ್ಸ್ಟೇಬಲ್ ಕುಮಾರ್ ಸಚಿನ್ ಸಹಕರಿಸಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






