ಉಪನ್ಯಾಸಕಿ ಸವಿತಾ ಎರ್ಮಾಳ್ ಗೆ ಜ್ಞಾನ ಸಂಜೀವಿನಿ ರಾಜ್ಯ ಪ್ರಶಸ್ತಿ ಪುರಸ್ಕಾರ
Views: 163
ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಜ್ಞಾನ ಮಾಸ ಪತ್ರಿಕೆ ಬೆಂಗಳೂರು ಇವರ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಹಾಸನದಲ್ಲಿ ನೆರವೇರಿದ್ದು, ಪದವಿ ಪೂರ್ವ ವಿಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿನ ಉಪನ್ಯಾಸಕಿಯಾದ ಶ್ರೀಮತಿ ಸವಿತಾ ಎರ್ಮಾಳ್ ಇವರಿಗೆ ” ಜ್ಞಾನ ಸಂಜೀವಿನಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹಲವಾರು ವರ್ಷಗಳಿಂದ ತಾವು ಬೋಧಿಸುತ್ತಿರುವ ವಿಷಯದಲ್ಲಿ ನಿರಂತರವಾಗಿ ಶೇಕಡಾ 98 ಕ್ಕಿಂತಲೂ ಹೆಚ್ಚು ಫಲಿತಾಂಶ ಬರುವಲ್ಲಿ ಶ್ರಮವಹಿಸುತ್ತಿದ್ದು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಯಾಗಿ ಮತ್ತು ವಿಭಾಗಾಧಿಕಾರಿಯಾಗಿ ಪ್ರತಿ ವರ್ಷ ವಿಶೇಷ ಶಿಬಿರಗಳನ್ನು ಆಯೋಜಿಸಿ ಎನ್ಎಸ್ಎಸ್ ಚಟುವಟಿಕೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕರಾಗಿದ್ದಾರೆ. ಭೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಉಡುಪಿ ಜಿಲ್ಲೆಯ ರಾಯಭಾರಿಯಾಗಿ ವಿಶೇಷ ಜಾಗೃತಿ ಮೂಡಿಸಿರುವರು. ಪೋಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಸಂಸ್ಥೆಯ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಹದಿಹರೆಯದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಇವರ ಸಾಧನೆಯನ್ನು ಗಮನಿಸಿ ರಾಜ್ಯ ಮಟ್ಟದ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.






