ಇಂಡಿಕಾ ಪುರಸ್ಕಾರಕ್ಕೆ ಬಡಗು ತಿಟ್ಟಿನ ಪ್ರಖ್ಯಾತ ವೇಷಧಾರಿ ತೀರ್ಥಹಳ್ಳಿ ಗೋಪಾಲ ಆಚಾರ್ ಆಯ್ಕೆ
Views: 41
ಕನ್ನಡ ಕರಾವಳಿ ಸುದ್ದಿ: ಕೋಟ ಮಣೂರು ಪಡುಕರೆಯ ಇಂಡಿಕಾ ಕಲಾ ಬಳಗ ಪ್ರತಿ ವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರಕ್ಕೆ, ಹಿರಿಯ ಯಕ್ಷಗಾನ ಕಲಾವಿದ ಯಕ್ಷ ತೀರ್ಥ ತೀರ್ಥಹಳ್ಳಿ ಗೋಪಾಲ ಆಚಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಫೆ. 8 ರಂದು ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂಟಪದಲ್ಲಿ ನಡೆಯುವ ಇಂಡಿಕಾ 16ನೇ ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಜೊತೆಗೆ ಪ್ರತಿಭಾ ಪುರಸ್ಕಾರ, ವಿಶೇಷ ಅಭಿನಂದನೆ, ಅಶಕ್ತರಿಗೆ ನೆರವು ನೀಡುವ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಇದೇ ಸಂದರ್ಭ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳ ನೃತ್ಯ ವೈವಿಧ್ಯ ಪಿಂಗಾರ ಕಲಾವಿದರು ಬೆದ್ರ ಮಂಗಳೂರು ಇವರಿಂದ ಓಂಕಾರ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಇಂಡಿಕಾ ಕಲಾಬಳಗದ ಸಂಚಾಲಕ ಪ್ರಭಾಕರ್ ಪಡುಕರೆ, ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಸಮಿತಿಯ ಪ್ರಮುಖರಾದ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೀರ್ಥಹಳ್ಳಿ ಗೋಪಾಲ ಆಚಾರ್

ತೀರ್ಥಹಳ್ಳಿ ಗೋಪಾಲ ಆಚಾರ್ ಬಡಗುತಿಟ್ಟು ಯಕ್ಷಗಾನ ರಂಗ ಕಂಡ ಪ್ರಖ್ಯಾತ ಪುಂಡುವೇಷಧಾರಿಗಳಲ್ಲಿ ಒಬ್ಬರು ಅಭಿಮನ್ಯು, ಬಬ್ರುವಾಹನ, ಸುಧನ್ವ, ಚಂದ್ರಹಾಸ, ದೇವವ್ರತ ಮೊದಲಾದ ಪುಂಡುವೇಷಗಳಲ್ಲಿ ಯಕ್ಷಗಾನ ವೇದಿಕೆಗಳಲ್ಲಿ ತನ್ನ ಪ್ರದರ್ಶನದಿಂದಲೇ ದೂಳೆಬ್ಬಿಸಿದವರು.
ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಶೈಥಿಲ್ಯನಾಗಿ ಜನಮನ್ನಣೆ ಗಳಿಸಿದರು. ಕಾಲ್ಪನಿಕ ಮತ್ತು ಸಾಮಾಜಿಕ ಪ್ರಸಂಗಗಳಲ್ಲಿ ಅಲ್ಲದೆ ಪೌರಾಣಿಕ ಪ್ರಸಂಗಗಳ ಪಾತ್ರಗಳಾದ ಧರ್ಮಂಗದ, ರುಕ್ಮಾಂಗ, ಶುಭಾಂಗ, ಚಿತ್ರಕೇತ, ಕುಶ, ಲವ ಮೊದಲಾದ ಪಾತ್ರಗಳಲ್ಲಿ ಅಭೂತಪೂರ್ವ ಜನಮನ್ನಣೆಯನ್ನು ಗಳಿಸಿದರು.
ಬಡಗು ಮತ್ತು ಬಡಾ ಬಡಗು ಈ ಎರಡೂ ಶೈಲಿಗಳ ನೃತ್ಯವನ್ನು ಕರಗತ ಮಾಡಿಕೊಂಡಿದ್ದ ಗೋಪಾಲ ಆಚಾರ್ಯರು ಎರಡೂ ನೃತ್ಯ ಶೈಲಿಗಳನ್ನು ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸುತ್ತಿದ್ದರು. ಇವರ ಈ ಸಾಧನೆಗಾಗಿ ಇಂಡಿಕಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.






