ಒಂಟಿತನಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡ ಮಹಿಳೆ!
Views: 0
ಕನ್ನಡ ಕರಾವಳಿ ಸುದ್ದಿ: ವಾಟ್ಸಾಪ್ ಸ್ಟೇಟಸ್ ಹಾಕಿ ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ನಿಧನರಾದ ಘಟನೆ ನಡೆದಿದೆ.
ಕಾಸರಗೋಡು ಕಲೆಕ್ಟರೇಟ್ ನ ಎಂಡೋಸಲ್ಫಾನ್ ಸೆಲ್ ನಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 41 ವರ್ಷ ಪ್ರಾಯದ ಆಶಾಲತಾ ಆತ್ಮಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡ ಮಹಿಳೆ.
ಜಿಮ್ಗೆ ತೆರಳಿದ್ದ ಆಶಾಲತಾ, ಮಧ್ಯಾಹ್ನ ತಾನೇ ಸ್ವತಃ ಕಾರು ಚಲಾಯಿಸಿಕೊಂಡು ಚೆಂಗಲದ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆಗೆ ಬಂದು, ತಾವು ವಿಷ ಸೇವಿಸಿರುವುದಾಗಿ ವೈದ್ಯರಿಗೆ ತಿಳಿಸಿದ್ದರು. ಕೂಡಲೇ ಚಿಕಿತ್ಸೆ ನೀಡಲಾಯಿತ್ತಾದರೂ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ.
ಅವರು ಮಾರ್ಮಿಕವಾಗಿ ಹಾಕಿದ್ದ ವಾಟ್ಸಾಪ್ ಸ್ಟೇಟಸ್ ಯಾರನ್ನಾದರೂ ಉದ್ದೇಶಿಸಿ ಹಾಕಲಾಗಿದೆಯೇ ಅಥವಾ ವೈಯಕ್ತಿಕ ಕಾರಣವೇ ಎನ್ನುವುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.
ಎಂಎ ಮತ್ತು ಬಿಎಡ್ ಪದವೀಧರೆಯಾಗಿದ್ದ ಆಶಾಲತಾ, ಕಲೆಕ್ಟರೇಟ್ ರೀಡಿಂಗ್ ಕ್ಲಬ್ ನ ಅಧ್ಯಕ್ಷರಾಗಿದ್ದರು. ಕಥೆ ಹೇಳುವಿಕೆ ಮತ್ತು ಏಕ-ಪಾತ್ರಾಭಿನಯ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ಬಹುಮಾನ ಗೆದ್ದಿದ್ದ ಇವರು ಸಿಪಿಎಂ ಸಂಯೋಜಿತ ಎನ್ ಜಿಒ ಒಕ್ಕೂಟದಲ್ಲೂ ಸಕ್ರಿಯರಾಗಿದ್ದರು. ಚಿಕಿತ್ಸೆ ವೇಳೆ ನೀಡಿದ್ದ ಹೇಳಿಕೆಯಲ್ಲಿ ಆಶಾಲತಾ ತಮಗೆ ತೀವ್ರ ಒಂಟಿತನಕಾಡುತ್ತಿರುವುದಾಗಿ ತಿಳಿಸಿದ್ದರು. ಇವರ ಪತಿ ಗಲ್ಫ್ ನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.
ಇನ್ನು ಆಶಾಲತಾ ಅವರು ಪತಿ ಅಜಯ್ ಕುಮಾರ್, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸದ್ಯ ಪೊಲೀಸರು ಶವಪರೀಕ್ಷೆಯ ನಂತರ ತನಿಖೆಯನ್ನು ತೀವ್ರಗೊಳಿಸಿದ್ದಾರೆ.






