ಶರಣಾದ ನಕಲ್ ಲಕ್ಷ್ಮೀ ತೊಂಬಟ್ಟುಗೆ ಮತ್ತೆ ನ್ಯಾಯಾಂಗ ಬಂಧನ

Views: 66
ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾದ ನಕಲ್ ಲಕ್ಷ್ಮೀ ತೊಂಬಟ್ಟುಗೆ ಕುಂದಾಪುರದ 2ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.
ನಕಲ್ ಚಳುವಳಿಗೆ ಸೇರಿ ಅಲ್ಲಿನ ಸಂಗಾತಿ ನಕ್ಸಲ್ ಸಲೀಂ ಎಂಬಾತನನ್ನು ಮದುವೆಯಾಗಿ ಆಂಧ್ರ ಪ್ರದೇಶದಲ್ಲಿ ತಲೆಮರೆಸಿ ಕೊಂಡಿದ್ದ ಕುಂದಾಪುರದ ತೊಂಬಟ್ಟು ಗ್ರಾಮದ ಲಕ್ಷ್ಮಿ ಫೆ.2ರಂದು ಉಡುಪಿಯಲ್ಲಿ ಶರಣಾಗಿದ್ದಳು. ನಂತರ ಆಕೆಗೆ ಜಿಲ್ಲಾ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಆಕೆಯ ಮೇಲೆ ಅಮಾಸೆಬೈಲಿನಲ್ಲಿ ಕೂಂಬಿಂಗ್ ನಿರತ ಪೊಲೀಸರ ಮೇಲೆ ಗುಂಡಿನ ದಾಳಿ, ಮನೆಗೆ ನುಗ್ಗಿ ಕೊಲೆ ಬೆದರಿಕೆ ಮತ್ತು ಸಾರ್ವಜನಿಕ ಜಾಗದಲ್ಲಿ ಕರಪತ್ರ ಮತ್ತು ಬ್ಯಾನರ್ ಅಂಟಿಸಿದ ಪ್ರಕರಣಗಳಿದ್ದು ಈ ಬಗ್ಗೆ ವಿಚಾರಣೆಗೆ ಪೊಲೀಸ್ ವಶಕ್ಕೆ ನೀಡಿತ್ತು. ನಂತರ ಕುಂದಾಪುರ ಡಿವೈಎಸ್ಪಿ ಕುಲಕರ್ಣಿ ನೇತೃತ್ವದಲ್ಲಿ ಆಕೆಯನ್ನು ವಿಚಾರಣೆ ನಡೆಸಲಾಯಿತು. ಆಕೆಯ ಮೇಲಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಕೆಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಕೂಡ ಮಾಡಲಾಗಿದೆ.
ಇದೀಗ ಪೊಲೀಸ್ ವಶದ ಅವಧಿ ಮುಗಿದು ನ್ಯಾಯಾಲಯ ಮತ್ತೆ ಹಾಜರುಪಡಿಸಿದಾಗ ಮುಂದಿನ 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ






