ಮಹಡಿಯಿಂದ ಬಿದ್ದು ವ್ಯಕ್ತಿ ಸಾವು ಪ್ರಕರಣ:ಅಂತ್ಯಕ್ರಿಯೆ ವೇಳೆ ಬಯಲಾಯ್ತು ಕೊಲೆ ರಹಸ್ಯ!
Views: 166
ಕನ್ನಡ ಕರಾವಳಿ ಸುದ್ದಿ:ಮೊದಲ ಮಹಡಿಯಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣವೊಂದು ಈಗ ಕೊಲೆ ರಹಸ್ಯ ಬಯಲಾಗಿದೆ.
ಬೆಂಗಳೂರಿನಲ್ಲಿ ಇನಾಯತ್ ಮೃತಪಟ್ಟ ವ್ಯಕ್ತಿ. ಮಸೂರ್ ಅಹ್ಮದ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ. ಮೃತ ಇನಾಯತ್ ಮೆಕಾನಿಕ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ಮೃತ ಇನಾಯತ್ ಬೆಂಗಳೂರಿನ ವಿವೇಕ ನಗರದ ಆಸ್ಟೀನ್ ಟೌನ್ನಲ್ಲಿ ತನ್ನ ಮಾವ ಮಸೂರ್ ಅಹ್ಮದ್ನ ಮನೆಯಲ್ಲಿ ಕಳೆದ 11 ವರ್ಷಗಳಿಂದ ವಾಸವಾಗಿದ್ದ. ಇತ್ತೀಚೆಗೆ ಕೌಟುಂಬಿಕ ಕಲಹದಿಂದಾಗಿ ಇನಾಯತ್ಗೆ ಡಿವೋರ್ಸ್ ಆಗಿದ್ದು, ಬಳಿಕ ಒಂಟಿಯಾಗಿ ವಾಸವಿದ್ದ ಇನಾಯತ್ಗೆ ಮನೆ ಖಾಲಿ ಮಾಡುವಂತೆ ಮಾವ ಮಸೂರ್ ಅಹ್ಮದ್ ಕಿರುಕುಳ ನೀಡಲು ಶುರು ಮಾಡಿದ್ದ.
ಕಳೆದ ಭಾನುವಾರ ಮನೆಗೆ ಬಂದ ಇನಾಯತ್ ಮಾವ ಇದೇ ವಿಚಾರಕ್ಕೆ ಜಗಳ ಆಡಿದ್ದಲ್ಲದೇ, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಇನಾಯತ್ಗೆ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಬಳಿಕ ಮದ್ಯದ ಅಮಲಿನಲ್ಲಿ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇನಾಯತ್ ಮೃತಪಟ್ಟಿದ್ದಾನೆ ಎಂದು ಮಾವನೇ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದ.
ಬಳಿಕ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ತೀರ್ಮಾನ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆ ಮಾಡಿ, ಇನ್ನೇನು ಮೃತದೇಹವನ್ನು ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಪೊಲೀಸರ ಭೇಟಿಯಿಂದ ರಹಸ್ಯ ಬಯಲಾಗಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್ನಲ್ಲಿ ಮೃತದೇಹದ ಹಲವು ಕಡೆಗಳಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದ್ದು, ಆರೋಪಿ ಮಸೂರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.






