ಸಾಮಾಜಿಕ

ಜಾತಿ ಗಣತಿ ವರದಿ ಅನುಷ್ಠಾನ ಮಾಡದೇ  ತಿರಸ್ಕರಿಸಿ: ಶೋಭ ಕರಂದ್ಲಾಜೆ ಒತ್ತಾಯ

Views: 47

ಕನ್ನಡ ಕರಾವಳಿ ಸುದ್ದಿ:ಜಾತಿ ಗಣತಿ ವರದಿಯನ್ನು ಅನುಷ್ಠಾನ ಮಾಡದೇ ಅದನ್ನು ತಿರಸ್ಕರಿಸಬೇಕು ಎಂದು ಕೇಂದ್ರ ಸಚಿವ ಶೋಭ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಜಾತಿ ಗಣತಿ ವರದಿಯ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿವೆ. ಹಾಗಾಗಿ ವರದಿ ಅನುಷ್ಠಾನ ಬೇಡ. ಅದನ್ನು ತಿರಸ್ಕರಿಸಿ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಹಿಂದೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಮೇಲುಸ್ತುವಾರಿಯಲ್ಲಿ ಸಿದ್ಧಪಡಿಸಲಾದ ಜಾತಿ ಗಣತಿ ವರದಿ ದೋಷಪೂರಿತವಾಗಿದೆ. ವಿವಿಧ ಸಮುದಾಯಗಳ ಜನಸಂಖ್ಯೆಯ ಅಂಕಿ-ಅಂಶಗಳಲ್ಲೂ ಅತ್ಯಂತ ಎದ್ದು ಕಾಣುವ ವ್ಯತ್ಯಾಸಗಳು ಇವೆ. ಹೀಗಾಗಿ ಈ ವರದಿ ಜಾರಿ ಬೇಡ ಎಂದು ಅವರು ಹೇಳಿದ್ದಾರೆ.

ಜಾತಿ ಗಣತಿ ವರದಿಯಲ್ಲಿ ಲಿಂಗಾಯತ ಜನಸಂಖ್ಯೆ ಕೇವಲ 60 ಲಕ್ಷ ಎಂದು ಉಲ್ಲೇಖಿಸಿರುವ ಬಗ್ಗೆ ಸೋರಿಕೆಯಾಗಿರುವ ಮಾಹಿತಿಗಳು ಹೇಳಿವೆ. ಆದರೆ ವೀರಶೈವ-ಲಿಂಗಾಯತರ ಸಂಖ್ಯೆ 1.25 ಕೋಟಿ ಮೀರಿದೆ. ಸಾದರ ಲಿಂಗಾಯತರನ್ನು ವರದಿಯಲ್ಲಿ 67 ಸಾವಿರ ಎಂದು ತೋರಿಸಲಾಗಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಸುಮಾರು 60 ಸಾವಿರ ಸಾದರ ಲಿಂಗಾಯತರಿದ್ದಾರೆ. ಇದನ್ನೆಲ್ಲಾ ನೋಡಿದರೆ ವರದಿ ಸಮರ್ಪಕವಾಗಿಲ್ಲ. ಇದನ್ನು ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಾತಿ ಗಣತಿ ವರದಿಗೆ 169 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಜಾತಿ ಗಣತಿಗೆ ಸಂಬಂಧಿಸಿದ ವಿಧಾನಗಳು, ಸಂಶೋಧನೆಗಳು ಮತ್ತು ವೆಚ್ಚಗಳನ್ನು ವಿವರಿಸುವ ಶ್ವೇತ ಪತ್ರವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Related Articles

Back to top button