ಕುಂದಾಪುರ: ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತೋತ್ಸವ ‘ಶ್ರಾವಣಿ’ ಕಾರ್ಯಕ್ರಮ
Views: 17
ಕನ್ನಡ ಕರಾವಳಿ ಸುದ್ದಿ: ಮಾತುಗಳು ಸಂಸ್ಕೃತ ಭೂಯಿಷ್ಠವಾಗಿದ್ದರೆ ಸಭ್ಯ. ಯಾವುದೇ ಭಾಷೆಯ ಮೇಲೆ ಹಿಡಿತ ಬರಬೇಕಾದರೆ ಮೂಲಬೇರು ಸರಿಯಾಗಿರಬೇಕು. ಅಮೂಲ್ಯವಾದ ಜ್ಞಾನದಿಂದ ಪ್ರಯತ್ನ ಶಾಲಿಗಳಾಗಿ ಜಗತ್ತಿನ ಹಲವು ಸಂಗತಿಗಳನ್ನು ಪಡೆದುಕೊಳ್ಳಬಹುದು. ಮಾತೃ ಸ್ಥಾನದಲ್ಲಿ ಕಂಗೊಳಿಸುವ ಸಂಸ್ಕೃತದ ಅಭ್ಯಾಸವು ಪರಿಪೂರ್ಣ ಜ್ಞಾನ ಸಂಗ್ರಹಕ್ಕೆ ಸಹಕಾರಿಯಾಗುತ್ತದೆ ಎಂದು ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಸಂಸ್ಕೃತೋತ್ಸವ ‘ಶ್ರಾವಣಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀ ಬಾಲಕೃಷ್ಣ ನಕ್ಷತ್ರಿಯವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ್ ಕುಮಾರ ಶೆಟ್ಟಿಯವರು ‘ಉನ್ನತ ಬುದ್ದಿಮತ್ತೆಯ ವಿದ್ಯಾರ್ಥಿಗಳು ಆಯ್ದುಕೊಳ್ಳುವ ಭಾಷೆಯೆಂದಿದ್ದ ಸಂಸ್ಕೃತವು ಅಭಿವ್ಯಕ್ತಿಯಲ್ಲಿ ಸರಳೀಕರಣಗೊಂಡು ಹೆಚ್ಚೆಚ್ಚು ವಿದ್ಯಾರ್ಥಿಗಳ ಆಯ್ಕೆಯ ವಿಷಯವಾಗುತ್ತಿರುವುದು ಸಂತಸ ಎಂದು ತಿಳಿಸಿದರು.
ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿನಿ ಅಕ್ಷಯಾ ಹಾಗೂ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶತ ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅದಿತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅನನ್ಯ ಸಿ.ಶೆಟ್ಟಿ ಧನ್ಯವಾದ ಸಲ್ಲಿಸಿದರು.






