ಕೋಟ: ಮಣೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.84 ಲಕ್ಷ ರೂ.ಮೌಲ್ಯದ 320 ಚೀಲ ಅನ್ನಭಾಗ್ಯ ಅಕ್ಕಿ ವಶ
Views: 46
ಕನ್ನಡ ಕರಾವಳಿ ಸುದ್ದಿ: ಸರಕಾರದ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಉಚಿತ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ಭೇದಿಸಿದ್ದು ಜಂಟಿ ದಾಳಿ ನಡೆಸಿ 160 ಕ್ವಿಂಟಲ್ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ ನಿರೀಕ್ಷಕ ವಸಂತ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಹಾಗೂ ಸಿಬಂದಿಯೊಂದಿಗೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಮಹಾಲಕ್ಷ್ಮೀ ಹೊಟೇಲ್ ಎದುರು ದಾಳಿ ನಡೆಸಿದರು. ಈ ವೇಳೆ ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.
ಕುಮಟಾದ ತನಿಖೆಯಲ್ಲಿ ನಾಡಮಸ್ಕಿರಿಯ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲಕ ನಾಗರಾಜ್ ನಾಯ್ಕ ಅವರು ಅಕ್ಕಿಯನ್ನು ಲಾರಿಗೆ ತುಂಬಿಸಿದ್ದು, ಕೇರಳದ ಕಾಸರಗೋಡಿನ ಶಾಜಿ ಟ್ರೇಡಿಂಗ್ ಕಂಪೆನಿಗೆ ಸಾಗಿಸಲು ಲಾರಿ ಮಾಲಕ ಗಿರೀಶ್ ನಾಯ್ಕ ಸೂಚನೆ ಮೇರೆಗೆ ಚಾಲಕ ಕೆ. ನರಸಿಂಹ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ.
ದಾಳಿಯ ವೇಳೆ 320 ಚೀಲಗಳಲ್ಲಿ ತುಂಬಿದ್ದಒಟ್ಟು 160 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಕಿಯ ಅಂದಾಜು ಮೌಲ್ಯ 3.84 ಲಕ್ಷ ರೂ. ಆಗಿದ್ದು, ಲಾರಿಯ ಮೌಲ್ಯ 3.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಒಟ್ಟು 7.34 ಲಕ್ಷರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .






