ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಭಾವ್ಯರ ಪಟ್ಟಿ ಅಂತಿಮ! ಗುರುವಾರವೇ ಪ್ರಮಾಣ ವಚನ?
Views: 47
ಕನ್ನಡ ಕರಾವಳಿ ಸುದ್ದಿ: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಬಹುತೇಕ ಸಮ್ಮತಿ ನೀಡಿದ್ದರೂ, ಅಧಿಕೃತ ಸಭೆ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ. ಮಂಗಳವಾರ ಸಂಜೆಯೇ ಪಟ್ಟಿ ಅಂತಿಮವಾದರೂ, ರಾಜ್ಯಪಾಲರ ಅನುಪಸ್ಥಿತಿಯ ಕಾರಣ ಪ್ರಮಾಣವಚನ ಕಾರ್ಯಕ್ರಮವು ಬುಧವಾರದ ಬದಲಿಗೆ ಗುರುವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇತರೆ ರಾಜ್ಯ ನಾಯಕರೊಂದಿಗೆ ಸೋಮವಾರ ರಾತ್ರಿಯೇ ಪಕ್ಷದ ವರಿಷ್ಠರು ಚರ್ಚೆ ನಡೆಸಿ, ಸಂಪುಟಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎನ್ನಲಾಗಿತ್ತು.ಆದರೆ ಸಂಸತ್ ಅಧಿವೇಶನ ತಡವಾದ ಕಾರಣದಿಂದ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ರಾಹುಲ್ ಗಾಂಧಿ ಅವರ ಸೂಚನೆಯಂತೆ ಅನುಭವಿ ಹಾಗೂ ಹೊಸ ಮುಖಗಳಿಗೆ ಮಣೆಹಾಕಿರುವ ಪಟ್ಟಿಗೆ ಮಂಗಳವಾರ ಹೈಕಮಾಂಡ್ ಅಂತಿಮಮುದ್ರೆ ಒತ್ತುವ ಸಾಧ್ಯತೆಯಿದ್ದು, ಗುರುವಾರ ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ಖಚಿತ ಎನ್ನಲಾಗಿದೆ.
ಮೂರು ನಾಯಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ, ಬಳಿಕ ಕೂತು ಪಟ್ಟಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗ್ಗೆ ಬೆಂಗಳೂರಿಗೆ ರಾಜ್ಯ ನಾಯಕರು ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಆಪ್ತವಲಯದಲ್ಲಿರುವ ಎಸ್.ಸಿ.ಮಹದೇವಪ್ಪ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಬ್ಯಾಟ್ ಮಾಡುವ ಸಾಧ್ಯತೆಯಿದೆ. ಮರಾಠ ಕೋಟ ಮುನ್ನೆಲೆಗೆ ಬಂದರೆ ಸಂತೋಷ್ ಲಾಡ್ಗೆ ಅದೃಷ್ಟ ಒಲಿಯುವ ಸಾಧ್ಯತೆಯಿದ್ದು, ಅವರಲ್ಲದಿದ್ದರೆ ಶ್ರೀನಿವಾಸ್ ಮಾನೆ ಸಂಪುಟಕ್ಕೆ ಸೇರಲಿದ್ದಾರೆ. ಆದರೆ ಎರಡನೇ ಹಂತದ ವಿಸ್ತರಣೆಯಲ್ಲಿ ತಮಗೆ ಅವಕಾಶ ಸಿಗಬಹುದು ಎನ್ನುವ ವಿಶ್ವಾಸದಲ್ಲಿದ್ದ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಹಿನ್ನಡೆಯಾಗಿದೆ. ಅವರ ಬದಲಿಗೆ ರಿಜ್ವಾನ್ ಅರ್ಷದ್, ಬೇಳೂರು ಗೋಪಾಲಕೃಷ್ಣ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಅಚ್ಚರಿಯಾಗಿ ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಎನ್.ಆರ್.ಸೀತಾರಾಮ್ ಹೆಸರುಗಳು ಕೇಳಿಬರುತ್ತಿವೆ. ಆದರೆ ಈ ಹೆಸರುಗಳ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಮೊದಲ ಹಂತದ ವಿಸ್ತರಣೆಯಲ್ಲಿ ಮಹಿಳಾ ಸಚಿವರು ಇಲ್ಲದೇ ಇರುವುದರಿಂದ ಎರಡನೇ ಹಂತದ ವಿಸ್ತರಣೆ ವೇಳೆ ಮಹಿಳಾ ಕೋಟಾದಲ್ಲಿ ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ, ಆರತಿ ಕೃಷ್ಣ ಹಾಗೂ ಖನೀಜಾ ಫಾತಿಮಾ ಹೆಸರು ಓಡುತ್ತಿದೆ. ಈ ನಾಲ್ವರಲ್ಲಿ ಪಕ್ಷದ ಹೈಕಮಾಂಡ್ ಯಾರಿಗೆ ಮಣೆಹಾಕಲಿದೆ ಎನ್ನುವ ಕುತೂಹಲಕ್ಕೆ ಮಂಗಳವಾರ ಸಂಜೆ ತೆರೆ ಬೀಳಲಿದೆ.
ಸಂಭಾವ್ಯರ ಪಟ್ಟಿ
ಬಿ.ಆರ್.ಪಾಟೀಲ್ (ವಿಧಾನಸಭಾಧ್ಯಕ್ಷ), ಆರ್.ವಿ.ದೇಶಪಾಂಡೆ, ಜಿ.ಟಿ.ಪಾಟೀಲ್, ಲೇಔಟ್ ಕೃಷ್ಣಪ್ಪ, ಬೇಳೂರು ಗೋಪಾಲಕೃಷ್ಣ, ಶಿವಲಿಂಗೇಗೌಡ, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ /ಖನೀಜಾ ಫಾತೀಮಾ/ತನ್ನೀರ್ ಸೇಠ್, ಮಾಗಡಿ ಬಾಲಕೃಷ್ಣ,ಚಲುವರಾಯಸ್ವಾಮಿ, ಎ.ಎಸ್.ಪೊನ್ನಣ್ಣ, ಶರತ್ ಬಚ್ಚೇಗೌಡ, ಅಪ್ಪಾಜಿ ನಾಡಗೌಡ, ಹಂಪನಗೌಡ ಬಾದರ್ಲಿ, ಶ್ರೀನಿವಾಸ್ ಮಾನೆ/ಸಂತೋಷ್ ಲಾಡ್,
ಯು.ಟಿ.ಖಾದರ್ ಅವರು ಸಚಿವರಾಗಿರುವುರಿಂದ ವಿಧಾನಸಭಾಧ್ಯಕ್ಷ ಸ್ಥಾನ ತೆರ ವಾಗಿದೆ. ಈ ಸ್ಥಾನಕ್ಕೆ ಆರಂಭದಲ್ಲಿ ಹಲವರ ಹೆಸರುಗಳು ಮುನ್ನೆಲೆಗೆ ಬಂದರೂ, ಇದೀಗ ಬಿ.ಆರ್.ಪಾಟೀಲ್ ಅಥವಾ ಎಚ್.ಕೆ. ಪಾಟೀಲ್ ನಡುವೆ ಯಾರು ಎನ್ನುವ ಕುತೂಹಲ ಮೂಡಿದೆ. ಎಚ್.ಕೆ.ಪಾಟೀಲ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಟ್ ಮಾಡಿದ್ದು, ಬಿ. ಆರ್.ಪಾಟೀಲ್ ಪರವಾಗಿ ಸಿದ್ದರಾಮಯ್ಯ ಅವರು ಬ್ಯಾಟ್ ಮಾಡಿದ್ದಾರೆ. ಬಿ.ಆರ್.ಪಾಟೀಲ್ ಹಿರಿಯ ಶಾಸಕರಾಗಿದ್ದು, ಈವರೆಗೆ ಅವರಿಗೆ ಯಾವುದೇ ಸಚಿವ ಸ್ಥಾನ ನೀಡಿಲ್ಲ. ಆದ್ದರಿಂದ ಅವರನ್ನೇ ಸ್ಪೀಕರ್ ಮಾಡಬೇಕು. ಈ ಮೂಲಕ ಕಲ್ಯಾಣ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯದ ಬಲವೂ ಪಕ್ಷಕ್ಕೆ ಸಿಗಲಿದೆ ಎನ್ನುವ ಮಾತನ್ನು ಹೇಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕಲಬುರಗಿಗೆ ಹೆಚ್ಚು ಅವಕಾಶ ಎನ್ನುವ ಮಾತುಗಳು ಕೇಳಿಬಂದರೆ, ಆಗ ಎಚ್.ಕೆ. ಪಾಟೀಲ್ ಹೆಸರು ಮುನ್ನಲೆಗೆ ಬರುವ ಸಾಧ್ಯತೆಯಿದೆ. ಇದರೊಂದಿಗೆ ದಿನೇಶ್ ಗುಂಡೂರಾವ್ ಅವರ ಹೆಸರೂ ಓಡುತ್ತಿದ್ದು, ಅಂತಿಮವಾಗಿ ಈ ಮೂವರಲ್ಲಿ ಯಾರ ಹೆಸರು ಅಂತಿಮಗೊಳಿಸಬಹುದು ಎನ್ನುವ ಕುತೂಹಲವಿದೆ.






