ಸ್ನೇಹಿತನ ಹೆಂಡತಿಯನ್ನೇ ಅಪರಿಸಿಕೊಂಡು ಹೋಗಿ ಮದುವೆ!
Views: 67
ಕನ್ನಡ ಕರಾವಳಿ ಸುದ್ದಿ: ತನ್ನ ಸ್ನೇಹಿತನ ಹೆಂಡತಿಯನ್ನೇ ಕರೆದುಕೊಂಡು ಓಡಿ ಹೋಗಿರುವ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯು ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.
ಓಡಿಹೋದ ಜೋಡಿಯನ್ನು ಪವಿತ್ರ ಮತ್ತು ಯೇಸುದಾಸ್ ಎಂದು ಗುರುತಿಸಲಾಗಿದೆ. ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ಇಬ್ಬರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ವಿವಾಹಿತರು ತಮ್ಮ ಸಂಸಾರ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.
ಮನೆ ಬಿಟ್ಟು ಎಸ್ಕೇಪ್ ಆಗಿದ್ದ ಪವಿತ್ರ ಮತ್ತು ಯೇಸುದಾಸ್, ಇದೀಗ ರಹಸ್ಯವಾಗಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ತಮ್ಮ ಮದುವೆ ಫೋಟೋಗಳನ್ನು ಕುಟುಂಬಸ್ಥರ ಮೊಬೈಲ್ಗೆ ಕಳುಹಿಸುವ ಮೂಲಕ ಶಾಕ್ ನೀಡಿದ್ದಾರೆ.
ಈ ಘಟನೆಯಿಂದಾಗಿ ಎರಡು ಕುಟುಂಬಗಳು ಬೀದಿಗೆ ಬಿದ್ದಂತಾಗಿದ್ದು, ಓಡಿಹೋದವಳ ಗಂಡ ಮತ್ತು ಓಡಿಹೋದವನ ಹೆಂಡತಿ ಇಬ್ಬರೂ ಕಂಗಾಲಾಗಿದ್ದಾರೆ. ಅತ್ತ ಪತ್ನಿಯನ್ನು ಕಳೆದುಕೊಂಡ ಗಂಡ, ಇತ್ತ ಗಂಡನನ್ನ ಕಳೆದುಕೊಂಡ ಹೆಂಡತಿ ತಮ್ಮ ಮಕ್ಕಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳ ಮುಖ ನೋಡಿಯಾದರೂ ವಾಪಸ್ ಬರುವಂತೆ ಕಣ್ಣೀರಿಡುತ್ತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ಅಕ್ರಮ ಸಂಬಂಧ ಮತ್ತು ಪಲಾಯನ ಕುರಿತಂತೆ ನೊಂದ ಕುಟುಂಬಸ್ಥರು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಓಡಿಹೋದ ಜೋಡಿಗಳ ವಿರುದ್ಧ ದೂರನ್ನು ದಾಖಲಿಸಿದ್ದಾರೆ.






