ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶ, ಕರ್ನಾಟಕದಲ್ಲಿ ಮುಂಗಾರು ಮಳೆ ಯಾವಾಗ?
Views: 51
ಕನ್ನಡ ಕರಾವಳಿ ಸುದ್ದಿ: ನೈಋತ್ಯ ಮುಂಗಾರು ನಿಗದಿತ ಸಮಯಕ್ಕಿಂತ 5 ದಿನ ಮುಂಚಿತವಾಗಿ, ಅಂದರೆ ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ಸಾಮಾನ್ಯವಾಗಿ ಕೇರಳದಲ್ಲಿ ಜೂನ್ 1ರಂದು ಮುಂಗಾರು ಆರಂಭವಾಗುತ್ತದೆ. ಇದು ನೈಋತ್ಯ ಮುಂಗಾರು ಹಂಗಾಮಿನ (ಜೂನ್ನಿಂದ ಸೆಪ್ಟೆಂಬರ್)ವಿನ ಆರಂಭವನ್ನು ಸೂಚಿಸುತ್ತದೆ.
ಕಳೆದ ವರ್ಷ ಮೇ 24ರಂದೇ ಮುಂಗಾರು ಆರಂಭವಾಗಿತ್ತು ಎಂದು ಐಎಂಡಿ ತಿಳಿಸಿದೆ.
ಈ ವಾರಾಂತ್ಯದಲ್ಲಿ ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಅಂಡಮಾನ್ ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೈಋತ್ಯ ಮುಂಗಾರು ಆರಂಭವಾಗಲು ಹವಾಮಾನ ಪರಿಸ್ಥಿತಿ ಪೂರಕವಾಗುತ್ತಿವೆ ಎಂದು ಐಎಂಡಿ ಮಂಗಳವಾರ ತಿಳಿಸಿತ್ತು.
ಸಾಮಾನ್ಯವಾಗಿ ಮುಂಗಾರು ಮೇ 20ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಪ್ರವೇಶಿಸುತ್ತದೆ. ಅನಂತರ ಅದು ಮತ್ತಷ್ಟು ಪಶ್ಚಿಮದ ಕಡೆಗೆ ಸಾಗಿ ಭಾರತದ ಮುಖ್ಯ ಭೂಭಾಗವನ್ನು ತಲುಪುತ್ತದೆ.
ಈ ವರ್ಷದ ಮುಂಗಾರು ಋತುವಿನಲ್ಲಿ ದೇಶಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪೆಸಿಫಿಕ್ ಮಹಾಸಾಗಾರದಲ್ಲಿ ಉಂಟಾಗುತ್ತಿರುವ ‘ಎಲ್ ನಿನೋ’ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ಮುಂಗಾರು ಮಳೆ ಯಾವಾಗ?:
ಕೇರಳಕ್ಕೆ ಪ್ರವೇಶಿಸಿದ ಸುಮಾರು ಒಂದು ವಾರದ ನಂತರ ಮುಂಗಾರು ಮಳೆಯು ಕರ್ನಾಟಕವನ್ನು ಪ್ರವೇಶಿಸುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಜೂನ್ ಮೊದಲ ವಾರದಲ್ಲೇ ರಾಜ್ಯಕ್ಕೆ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ.






