ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್ಗೆ ಗ್ರೀನ್ ಸಿಗ್ನಲ್ !
Views: 37
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ವಿವಾದಕ್ಕೆ ಕರ್ನಾಟಕ ಸರ್ಕಾರವು ತೆರೆ ಎಳೆದಿದೆ.
ಹಿಂದಿನ ಬಿಜೆಪಿ ಸರ್ಕಾರವು 2022ರಲ್ಲಿ ಹೊರಡಿಸಿದ್ದ ಹಿಜಾಬ್ ನಿಷೇಧದ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್ ಸೇರಿದಂತೆ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು 1995ರ ನಿಯಮಾವಳಿಗಳ ಅಡಿಯಲ್ಲಿ ಸರ್ಕಾರವು ಈ ಹೊಸ ಆದೇಶವನ್ನು ಹೊರಡಿಸಿದೆ. ಇದರ ಅನ್ವಯ ಸಮವಸ್ತ್ರದ ಜೊತೆಗೆ ವಿದ್ಯಾರ್ಥಿಗಳು ಪೇಟ, ಟರ್ಬನ್, ಜನಿವಾರ, ರುದ್ರಾಕ್ಷಿ ಮತ್ತು ಹಿಜಾಬ್ಧರಿಸಲು ಅವಕಾಶ ನೀಡಲಾಗಿದೆ.ಇವುಗಳನ್ನು ಧರಿಸುವಾಗ ಶಾಲೆಯ ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ.ಯಾವುದೇ ವಿದ್ಯಾರ್ಥಿಯನ್ನು ಧರ್ಮ ಅಥವಾ ಸಂಪ್ರದಾಯದ ಆಧಾರದ ಮೇಲೆ ತಾರತಮ್ಯದಿಂದ ಕಾಣಬಾರದು.ಇವ ನಮ್ಮವ ಎಂಬ ಬಸವಣ್ಣನವರ ತತ್ವದಂತೆ ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಸಂಸ್ಥೆಗಳು ಪಾಲಿಸಬೇಕು.
ಈ ಆದೇಶದ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ಹಿಜಾಬ್ ಎಂಬುದು ಸಂಪ್ರದಾಯದ ಭಾಗವಾಗಿದ್ದು ಅದಕ್ಕೆ ಅನುಮತಿ ಇದೆ. ಆದರೆ ಕೇಸರಿ ಶಾಲು ಧಾರ್ಮಿಕ ಸಂಕೇತವಾಗಿ ಬರುವುದಿಲ್ಲ, ಆದ್ದರಿಂದ ಅದಕ್ಕೆ ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ. ಈ ಆದೇಶವು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿರುವ ಯಾವುದೇ ಹಳೆಯ ಸುತ್ತೋಲೆಗಳು ಅಥವಾ ಸಂಸ್ಥೆಗಳ ನಿರ್ಧಾರಗಳು ಇಂದಿನಿಂದ ಅನೂರ್ಜಿತಗೊಳ್ಳಲಿವೆ. ಮಕ್ಕಳ ಶಿಕ್ಷಣ ಹಕ್ಕುಮತ್ತು ಸಾಂವಿಧಾ ನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.






