ಪ್ರೀತಿ ವೈಫಲ್ಯದ ಭೀತಿ: ವಿದ್ಯಾರ್ಥಿನಿ ಜೀವಾಂತ್ಯ
Views: 44
ಕನ್ನಡ ಕರಾವಳಿ ಸುದ್ದಿ: ಪ್ರೇಮ ಪ್ರಕರಣವೊಂದರಲ್ಲಿ ಭವಿಷ್ಯದ ಬಗ್ಗೆ ಆತಂಕಗೊಂಡು ಇಲಿಪಾಷಣ ಸೇವಿಸಿದ ವಿದ್ಯಾರ್ಥಿನಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ದುರಂತ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಮಾಯದ ಬಾಳೆಮಂಡಿಕಲ್ಲು ನಿವಾಸಿ ದಿನೇಶ್ ನಾಯ್ಕ ಮತ್ತು ರೇವತಿ ದಂಪತಿಗಳ ದ್ವಿತೀಯ ಪುತ್ರಿ ರಮ (19) ಮೃತಪಟ್ಟ ವಿದ್ಯಾರ್ಥಿನಿ.
ವಾಮದಪದವು ಕಾಲೇಜಿನಲ್ಲಿ ದ್ವಿತೀಯ ಪದವಿ ವಿದ್ಯಾರ್ಥಿನಿಯಾಗಿದ್ದ ರಮ, ಕಳೆದ ಏಪ್ರಿಲ್ 25 ರಂದು ರಾತ್ರಿ ಮನೆಯಲ್ಲಿ ಇಲಿಪಾಷಣ ಸೇವಿಸಿದ್ದಾಳೆ. ತಕ್ಷಣವೇ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಮ ಏಪ್ರಿಲ್ 29 ರಂದು ಕೊನೆಯುಸಿರೆಳೆದಿದ್ದಾಳೆ.
ರಮ ಕಳೆದ ಒಂದು ವರ್ಷದಿಂದ ಯುವಕನೊಬ್ಬನೊಂದಿಗೆ ಪ್ರೀತಿ ಮಾಡುತ್ತಿದ್ದಳು. ಈ ವಿಷಯ ಎರಡೂ ಕುಟುಂಬಗಳಿಗೂ ತಿಳಿದಿದ್ದು. ಅವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ತಿಳಿದುಬಂದಿದೆ. ರಮಳ ತಂದೆ, ಆಕೆಯ ಪದವಿ ಮುಗಿದ ಒಂದು ವರ್ಷದ ನಂತರ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ, ತನ್ನ ತಂದೆ ಮುಂದೆ ಮದುವೆ ಮಾಡಿಸುವುದಿಲ್ಲವೋ ಎಂಬ ಭಯದಿಂದ ರಮ ಇಲಿಪಾಷಣ ಸೇವಿಸಿ ಬದುಕು ಕೊನೆಗೊಳಿಸಿಕೊಂಡಿದ್ದಾಳೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 30 ರಂದು ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿರುವುದು ಸ್ಥಳೀಯವಾಗಿ ಆಘಾತ ಮೂಡಿಸಿದೆ.






