‘ಉಪನ್ಯಾಸಕನ ಜೊತೆ ಅನೈತಿಕ ಸಂಬಂಧವಿದೆ’ ಸಹಪಾಠಿಗಳಿಂದ ಅಪಪ್ರಚಾರ; ಪ್ರಾಣಬಿಟ್ಟ ಬಿಎಎಂಎಸ್ ವಿದ್ಯಾರ್ಥಿನಿ
Views: 123
ಕನ್ನಡ ಕರಾವಳಿ ಸುದ್ದಿ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿ ಉಪನ್ಯಾಸಕನ ಜೊತೆ ಅನೈತಿಕ ಸಂಬಂಧವಿದೆ ಎಂದು ಸಹಪಾಠಿಗಳು ಮಾಡಿದ ಅಪಪ್ರಚಾರ ಹಾಗೂ ಅದರಿಂದಾದ ಅವಮಾನ ತಾಳಲಾರದೆ ವಿದ್ಯಾರ್ಥಿನಿಯೊಬ್ಬಳು ಪ್ರಾಣಬಿಟ್ಟಿದ್ದಾಳೆ.
ಏನಿದು ಘಟನೆ?
ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಎಂಎಸ್ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಲಿಖಿತಾ, ಮೃತ ದುರ್ದೈವಿ. ಲಿಖಿತಾ ಕಾಲೇಜಿನ ಉಪನ್ಯಾಸಕ ಡಾ. ರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆಕೆಯ ಸಹಪಾಠಿಗಳು ಕಾಲೇಜಿನಾದ್ಯಂತ ಅಪಪ್ರಚಾರ ಮಾಡಿದ್ದರು ಎನ್ನಲಾಗಿದೆ.
ಸಹಪಾಠಿಗಳು ಹಬ್ಬಿಸಿದ ಈ ಸುಳ್ಳು ಸುದ್ದಿಯನ್ನೇ ನಂಬಿದ ಉಪನ್ಯಾಸಕ ಡಾ. ರಾಜು ಪತ್ನಿ ನಿಶಾ ರಾಜ್, ಕಾಲೇಜಿಗೆ ಬಂದು ಎಲ್ಲರ ಮುಂದೆ ಲಿಖಿತಾ ಜೊತೆ ಗಲಾಟೆ ಮಾಡಿದ್ದರು. ಇಡೀ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಮುಂದೆ ತನಗಾದ ಈ ಅವಮಾನ ಸಹಿಸಿಕೊಳ್ಳಲಾಗದೆ ಲಿಖಿತಾ ಮನನೊಂದಿದ್ದರು.
ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಡೆತ್ ನೋಟ್ನಲ್ಲಿ ಉಲ್ಲೇಖಿಸಿರುವ ಲಿಖಿತಾ, ಹೊಳಲ್ಕೆರೆಯ ತನ್ನ ನಿವಾಸದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಸುಂದರ ಭವಿಷ್ಯ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿನಿ, ಸಹಪಾಠಿಗಳ ಕಿರುಕುಳ ಹಾಗೂ ಸುಳ್ಳು ಆರೋಪಕ್ಕೆ ಬಲಿಯಾಗಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.






