ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ತಿಮರೋಡಿಯ ಮೂವರು ಸಹಚರರ ಬಂಧನ

Views: 128
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಬಂಧನ ಕೂಡ ಆಗಿದ್ದು ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ನಡುವೆ ತಿಮರೋಡಿ ಗ್ಯಾಂಗ್ನ ಕೆಲವರನ್ನು ಅರೆಸ್ಟ್ ಮಾಡಲಾಗಿದೆ.
ಮಾತಿನ ಬರದಲ್ಲಿ ಬಿಜೆಪಿ ನಾಯಕ ಬಿ.ಎಲ್ ಸಂತೋಷ್ ವಿರುದ್ಧ ಆಡಿದ್ದ ಮಾತು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮುಳುವಾಗಿದ್ದು. ಜೈಲು ಸೇರೋ ಹಾಗೆ ಮಾಡಿದೆ
ಮಹೇಶ್ ಶೆಟ್ಟಿ ತಿಮರೋಡಿ ಹಿರಿಯಡ್ಕ ಸಬ್ ಜೈಲಿಗೆ ಸ್ಥಳಾಂತರ
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ದೂರು ದಾಖಲಾದ ಕಾರಣ ಉಡುಪಿಯ ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ನಿವಾಸದಿಂದ ತಿಮರೋಡಿಯನ್ನು ಬಂದಿಸಿದ್ದರು. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ, ವಿಚಾರಣೆ ನಡೆಸಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಜಾಮೀನು ರಹಿತ ಸೆಕ್ಷನ್ನಲ್ಲಿ ಕೇಸ್ ದಾಖಲಾಗಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿ ವಜಾಗೊಳಿಸಿ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಹಾಗೂ ಆಗಸ್ಟ್ 23 ಅಂದ್ರೆ ನಾಳೆ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಇನ್ನು ಕೋರ್ಟ್ ಆದೇಶದ ಬೆನ್ನಲ್ಲೇ ಬ್ರಹ್ಮಾವರ ಪೊಲೀಸರು, ಸಾಮಾಜಿಕ ಹೋರಾಟಗಾರ ಮಹೇಶ್ ತಿಮರೋಡಿಯನ್ನು ಹಿರಿಯಡ್ಕ ಸಬ್ ಜೈಲಿಗೆ ಬಿಟ್ಟು ಬಂದಿದ್ದಾರೆ. ಮತ್ತೊಂದೆಡೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ತಿಮರೋಡಿಯ ಮೂವರ ಸಹಚರರನ್ನು ಬಂಧಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದೊಯ್ಯುವ ವೇಳೆ, ಹಿಂಬದಿ ಬರುತ್ತಿದ್ದ ತಿಮರೋಡಿ ಸಹಚರರ ಕಾರು ಅಡಿಷನಲ್ ಎಸ್ಪಿ ಕಾರಿಗೆ ಗುದ್ದಿದೆ. ಈ ಕೃತ್ಯವು ಪೊಲೀಸರ ಕರ್ತವ್ಯಕ್ಕೆ ಉದ್ದೇಶಪೂರ್ವಕ ಅಡ್ಡಿ ಮಾಡಿದಂತಿದೆ ಎಂದು ಉಜಿರೆ ನಿವಾಸಿಗಳಾದ ಸೃಜನ್, ಹಿತೇಶ್, ಮತ್ತು ಸಹನ್ ಎಂಬ ಮೂವರನ್ನು ಬಂಧಿಸಲಾಗಿತ್ತು. ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆರೋಪಿಗಳು ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.