ಪ್ರೀತ್ಸೆ… ಪ್ರೀತ್ಸೆ..ಎಂದು ಒಂದೇ ಹುಡುಗಿಯ ಹಿಂದೆ ಬಿದ್ದ ಸ್ನೇಹಿತರು!.. ಒಬ್ಬ ಪರಲೋಕಕ್ಕೆ.. ಇನ್ನೊಬ್ಬ ಪರಪ್ಪನ ಅಗ್ರಹಾರಕ್ಕೆ

Views: 122
ಕನ್ನಡ ಕರಾವಳಿ ಸುದ್ದಿ: ಪ್ರೀತ್ಸೆ.. ಪ್ರೀತ್ಸೆ..ಎಂದು ಒಂದೇ ಹುಡುಗಿ ಹಿಂದೆ ಬಿದ್ದ ಸ್ನೇಹಿತರಲ್ಲಿ ಒಬ್ಬ ಪರಲೋಕ ಸೇರಿದ್ರೆ ಇನ್ನೊಬ್ಬ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ.
ಆತ್ಮೀಯ ಗೆಳೆಯರಾಗಿದ್ದ ದರ್ಶನ್ ಹಾಗೂ ವೇಣುಗೋಪಾಲ್ ಬೆಂಗಳೂರಿನ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಗ್ರಾಮದವರು. ಎಲ್ಲರಿಗೂ ಆಗೋ ಹಾಗೆ ಇವರಿಬ್ಬರಿಗೂ ಹದಿಹರೆಯದ ವಯಸ್ಸಿನಲ್ಲಿ ಲವ್ ಆಗಿತ್ತು. ಆದರೆ ಒಂದೇ ಹುಡುಗಿ ಮೇಲೆ ಇಬ್ಬರಿಗೂ ಲವ್ ಆಗಿ ದುರಂತವೇ ನಡೆದು ಹೋಗಿತ್ತು.
ಈ ಹಿಂದೆ ಅದೇ ಯುವತಿಯನ್ನು ವೇಣುಗೋಪಾಲ್ ಪ್ರೀತಿ ಮಾಡುತ್ತಿದ್ದ. 5 ವರ್ಷಗಳ ಹಿಂದೆ ಯುವತಿ ಮತ್ತು ವೇಣುಗೋಪಾಲ್ ನಡುವೆ ಪ್ರೀತಿ 1 ವರ್ಷದ ಹಿಂದೆಯೇ ಮುರಿದು ಬಿದ್ದಿತ್ತು. 4 ತಿಂಗಳಿಂದ ಅದೇ ಯುವತಿ ಹಾಗೂ ದರ್ಶನ್ ನಡುವೆ ಪ್ರೀತಿ ಶುರುವಾಗಿತ್ತು. ಆದರೂ ದರ್ಶನ್ ಹಾಗೂ ವೇಣುಗೋಪಾಲ್ ಸ್ನೇಹಿತರಾಗಿಯೇ ಇದ್ದರು. ಸಂಜೆ ಮನೆಯಲ್ಲಿದ್ದ ದರ್ಶನ್ ಗೆ ವೇಣು ಕರೆಮಾಡಿದ್ದ. ಕರೆ ಬರುತ್ತಿದ್ದಂತೆ ಮನೆಯಿಂದ ಹೊರಗೆ ಹೋಗಿದ್ದ ದರ್ಶನ್ ನನ್ನು ಪಾರ್ಟಿ ಮಾಡೋಣ ಬಾ ಅಂತ ಕರೆದಿದ್ದ. ಪಾರ್ಟಿಗೆ ಹೋಗುವಾಗ ದರ್ಶನ್ ಪ್ರೇಯಸಿಗೆ ಕರೆ ಮಾಡಿ ವೇಣು ಕರೆಯುತ್ತಿದ್ದಾನೆ ಹೋಗಿ ಬರ್ತೀನಿ ಎಂದಿದ್ದ. ಆದ್ರೆ ಪಾರ್ಟಿ ಮಾಡಿ ಕುಡಿಸಿ ದರ್ಶನ್ ನನ್ನು ಮನಸೋ ಇಚ್ಛೆ ಚುಚ್ಚಿ ವೇಣು ಹತ್ಯೆಮಾಡಿದ್ದ. ನಂತರ ದರ್ಶನ್ ಕೊಲೆಯಾಗಿರುವ ಬಗ್ಗೆ ಆತನ ತಂದೆಗೆ ಯುವತಿಯಿಂದ ಮಾಹಿತಿ ಸಿಕ್ಕಿತ್ತು. ದರ್ಶನ್ ತಂದೆ ದೂರು ಆಧರಿಸಿ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿ ವೇಣುಗೋಪಾಲನನ್ನು ಬಂಧಿಸಿದ್ದಾರೆ.