ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ಪ್ರಮಾಣ ವಚನ
Views: 25
ಕನ್ನಡ ಕರಾವಳಿ ಸುದ್ದಿ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣವಚನ ಬೋಧಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ತಮಿಳುನಾಡಿನಲ್ಲಿ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳ ವಾಡಿಕೆಗಳನ್ನು ಮುರಿದು ವಿಜಯ್ ಅವರ ಟಿವಿಕೆ ಪಕ್ಷವು ಸರ್ಕಾರ ರಚಿಸಿದೆ. ಆ ಮೂಲಕ ದಾಖಲೆ ಬರೆದಿದ್ದು, ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಮೊದಲ ದ್ರಾವಿಡಯೇತರ ಪಕ್ಷವೆನಿಸಿದೆ. ಅಲ್ಲದೆ ತಮಿಳುನಾಡಿನ ಚೊಚ್ಚಲ ಸಮ್ಮಿಶ್ರ ಸರ್ಕಾರ ಎನಿಸಿಕೊಂಡಿದೆ.
ಮೇ 13ರಂದು ಅಥವಾ ಅದಕ್ಕೂ ಮುನ್ನ ವಿಜಯ್ ಅವರು ತಮಿಳುನಾಡಿನ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಮಾಡುವ ನಿರೀಕ್ಷೆ ಇದೆ.
9 ಸಚಿವರು ಪ್ರಮಾಣ…ಒಂಬತ್ತು ಸಚಿವರು ಇಂದೇ ಪ್ರಮಾಣ ವಚನಕ್ಕೆ ಸಂಬಂಧ ನಿಯೋಜಿತ ಮುಖ್ಯಮಂತ್ರಿ ವಿಜಯ್ ಅವರ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ ಎಂದು ಲೋಕಭವನದ ಪ್ರಕಟಣೆ ತಿಳಿಸಿದೆ.
ವಿಜಯ್ ಅವರ ಹೊಸ ಸಂಪುಟದಲ್ಲಿ ನೂತನ ಸಚಿವೆ ಎಸ್. ಕೀರ್ತನಾ ಇರಲಿದ್ದಾರೆ. ಅಲ್ಲದೆ ಎನ್. ಆನಂದ್, ಕೆ.ಜಿ ಅರುಣರಾಜ್, ಕೆ.ಎ.ಸೆಂಗೊಟ್ಟೈಯನ್, ಆಧವ್ ಅರ್ಜುನ ಮತ್ತು ಸಿ.ಟಿ.ಆರ್ ನಿರ್ಮಲ್ ಕುಮಾರ್, ಎ ರಾಜ್ಮೋಹನ್, ಕೆ.ಟಿ ಪ್ರಭು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಗೆದ್ದಿರುವ ಟಿವಿಕೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಫಲಿತಾಂಶದ ಬಳಿಕ ನಡೆದ ನಾಟಕೀಯ ಬೆಳವಣಿಕೆಗಳ ಬಳಿಕ ಟಿವಿಕೆಯು ಕಾಂಗ್ರೆಸ್, ಸಿಪಿಐ, ಸಿಪಿಎಂ, ವಿಸಿಕೆ ಹಾಗೂ ಐಯುಎಂಎಲ್ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದೆ.






