ಮರವಂತೆ: “ನಮ್ಮ ನಿಮ್ಮ ನಡಿಗೆ ಆರೋಗ್ಯದೆಡೆಗೆ”

Views: 309
ಕನ್ನಡ ಕರಾವಳಿ ಸುದ್ದಿ: ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆ, ಪ್ರಾಥವಿಕ ಆರೋಗ್ಯ ಕೇಂದ್ರ, ಚೇತನಾ ಚಿಕಿತ್ಸಾಲಯ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಹಳೆ ವಿದ್ಯಾರ್ಥಿ ಸಂಘಗಳು, ಗ್ರಾಮ ಪಂಚಾಯಿತಿ, ಆಸರೆ ಚಾರಿಟಬಲ್ ಟ್ರಸ್ಟ್, ಸಂಗಮ ಯುವಕ ಮಂಡಲ, ಸ್ನೇಹ ಮಹಿಳಾ ಮಂಡಲ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮರವಂತೆ ಒಕ್ಕೂಟ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾಸಂಘ, ಹೋಲಿ ಫ್ಯಾಮಿಲಿ, ವಿಶ್ವಕರ್ಮ ಸಮಾಜ ಸೇವಾಸಂಘ, ದೇವಾಡಿಗ ಸಮಾಜ ಸೇವಾಸಂಘ, ಕಡಲಸಿರಿ ಸಂಜೀವಿನಿ ಒಕ್ಕೂಟ, ಯಕ್ಷೇಶ್ವರಿ ಮಹಿಳಾ ಮತ್ತು ಮಕ್ಕಳ ಭಜನಾ ತಂಡ-ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ‘ನಮ್ಮ ನಿಮ್ಮ ನಡಿಗೆ ಆರೋಗ್ಯದೆಡೆಗೆ’ ಕಾರ್ಯಕ್ರಮ ನಡೆಯಿತು.
ಸಾಧನಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೈದ್ಯಾಧಿಕಾರಿ ಡಾ. ಕೆ. ಗಣೇಶ ಭಟ್ಟ ಮಾತನಾಡಿ ನಡಿಗೆಯು ಅನಗತ್ಯ ದೇಹ ದಂಡನೆಗೆ ಕಾರಣವಾಗದ ಸರಳ ಮತ್ತು ಸುಲಭದ ವ್ಯಾಯಾಮ. ಇದು ಸಮರ್ಪಕ ರಕ್ತ ಪರಿಚಲನೆಗೆ ಸಹಕಾರಿಯಾಗುವುದರೊಂದಿಗೆ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ ಎಂದರು.
ಪ್ರತಿದಿನ ಕನಿಷ್ಠ ಅರ್ಧ ಗಂಟೆಯ ನಡಿಗೆಯು ದೇಹದ ಎಲ್ಲ ಜೀವಕೋಶಗಳಿಗೆ ಪ್ರಾಣವಾಯು ಪೂರೈಸುತ್ತದೆ. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ಹೇಳಿದ ಡಾ. ಭಟ್ಟರು ನಡಿಗೆ ವಿಚಾರದಲ್ಲಿ ವಿವಿಧ ವಯೋಮಾನದವರು ಅನುಸರಿಸಬೇಕಾದ ಎಚ್ಚರಗಳನ್ನು ವಿವರಿಸಿದರು.
ಸಾಧನಾ ಅಧ್ಯಕ್ಷ ಪುಟ್ಟ ಎಂ. ಬಿಲ್ಲವ ಗಣೇಶ ಭಟ್ಟರನ್ನು ಗೌರವಿಸಿದರು. ಜತೀಂದ್ರ ಮರವಂತೆ ಸ್ವಾಗತಿಸಿದರು. ದೇವಿದಾಸ ಶ್ಯಾನುಭಾಗ್ ವಂದಿಸಿದರು. ಭಾಗವಹಿಸಿದ್ದ 150 ಮಂದಿ ನಡಿಗೆಯಲ್ಲಿ ಪಾಲ್ಗೊಂಡರು.