ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಥೆ ಕಟ್ಟಿ ಪೋಲಿಸರ ಅತಿಥಿಯಾದ ಯುವತಿ!

Views: 96
ದಾವಣಗೆರೆ: ತನ್ನ ಮನೆಯಲ್ಲಿ ತಾನೇ ಕಳ್ಳತನ ಮಾಡಿ, ಸುಳ್ಳು ಕಥೆ ಕಟ್ಟಿದ್ದ ಯುವತಿ ಹಾಗೂ ಆಕೆಗೆ ಸಹಾಯ ಮಾಡಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಅಗರಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ತಸ್ಮೀಯಖಾನಂ (26), ಮುಜೀಬುಲ್ಲಾ ಶೇಖ್ ಅಲಿಯಾಸ್ ಜಾಕೀರ್ (42) ಬಂಧಿತರು.
ಅಗರಬನ್ನಿಹಟ್ಟಿ ಗ್ರಾಮದ ನಿವಾಸಿ ಅಮಾನುಲ್ಲಾ ಅವರ ಪುತ್ರಿ ತಸ್ಮೀಯಖಾನಂ ಮನೆಯಲ್ಲಿ ತಾನೊಬ್ಬಳೇ ಇದ್ದಾಗ ಕಳ್ಳತನವಾಗಿರುವುದಾಗಿ ಸುಳ್ಳು ಕಥೆ ಕಟ್ಟಿದ್ದಳು. ಅಪರಿಚಿತ ವ್ಯಕ್ತಿಯೋರ್ವ ಮನೆಗೆ ಬಂದು ತನ್ನ ಮುಖಕ್ಕೆ ಬಾಯಿಂದ ಊದಿ, ಬಳಿಕ ನೀರಿನಂತಹ ದ್ರವದಿಂದ ಚಿಮಿಕಿಸಿದ್ದರಿಂದ ನಾನು ಪ್ರಜ್ಞೆ ತಪ್ಪಿದೆ. ಕುಟುಂಬದವರು ಬಂದು ಎಬ್ಬಿಸಿದಾಗ ಪ್ರಜ್ಞೆ ಬಂದಿತು. ಆದರೆ, ಅಷ್ಟರಲ್ಲಾಗಲೇ ಮನೆಯ ಬೀರುವಿನ ಬೀಗ ತೆಗೆದು ಅದರಲ್ಲಿದ್ದ ಚಿನ್ನಾಭರಣ (ಸುಮಾರು 17 ತೊಲೆ) ಮತ್ತು 1 ಲಕ್ಷದ 20 ಸಾವಿರ ರೂ. ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಸ್ವತಃ ತಸ್ಮೀಯಖಾನಂ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪೊಲೀಸರಿಗೆ ಇದು ಆಕೆಯೇ ಕಟ್ಟಿದ ಸುಳ್ಳು ಕಥೆ ಎಂದು ಗೊತ್ತಾಗಿದೆ. ಅನುಮಾನದ ಹಿನ್ನೆಲೆ ತನಿಖೆ ನಡೆಸಿದಾಗ ಯುವತಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಜೀಬುಲ್ಲಾ ಜೊತೆ ಸೇರಿಕೊಂಡು ಈ ಕಳ್ಳತನ ಮಾಡಿದ್ದಳು. ಕಳ್ಳತನವಾಗಿದ್ದ ಬಂಗಾರ ಮತ್ತು ನಗದು ಹಣವನ್ನು ಶೇಖ್ ಅವರ ಶಿವಮೊಗ್ಗ ಮನೆಯಲ್ಲಿಟ್ಟಿದ್ದರು. ಈತನ ಮನೆಯಲ್ಲಿಟ್ಟಿದ್ದ 9.5 ಲಕ್ಷ ಬೆಲೆ ಬಾಳುವ 155 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಟ್ಟು 1,27,000 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹಾಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






