ಆರೋಗ್ಯ

ವಕ್ವಾಡಿ ಫ್ರೆಂಡ್ಸ್ (ರಿ) ವಕ್ವಾಡಿ ಇವರ ಆಶ್ರಯದಲ್ಲಿ  ‘ಸ್ಪಂದನ-2024’ ಬೃಹತ್ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ

Views: 318

ಕುಂದಾಪುರ: ವಕ್ವಾಡಿ ಫ್ರೆಂಡ್ಸ್ (ರಿ) ವಕ್ವಾಡಿ ಇವರ ಆಶ್ರಯದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ)ಉಡುಪಿ. ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ “ಸ್ಪಂದನ- 2024” ಬೃಹತ್ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ ಕಾರ್ಯಕ್ರಮ ಭಾನುವಾರ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಮಾಡುವುದರ ಮೂಲಕ ಶ್ರೇಷ್ಠ ದಾನ ಎನಿಸಿಕೊಂಡಿದೆ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕೆ.ಜಯಪ್ರಕಾಶ್ ಹೆಗ್ಡೆ ಶಿಬಿರಕ್ಕೆ ಚಾಲನೆ ನೀಡಿ, ‘ಎಲ್ಲಾ ದಾನಗಳಿಗಿಂತಲೂ ದೊಡ್ಡ ದಾನವೇ ರಕ್ತದಾನ. ಯಾವುದೇ ಜಾತಿ, ಮತ, ಧರ್ಮ, ಲಿಂಗ ಭೇದವನ್ನು ಬದಿಗಿಟ್ಟು ರಕ್ತದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸುವ ಮಹತ್ಕಾರ್ಯವಾಗಿದೆ ಎಂದರು.

ಉಡುಪಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಸತೀಶ್ ಸಾಲಿಯಾನ್ ಮಾತನಾಡಿ, ಒಂದು ಯುನಿಟ್ ರಕ್ತದಾನವನ್ನು ಮಾಡುವುದರಿಂದ ಮೂರು ಜೀವವನ್ನು ಉಳಿಸಬಹುದು ಇತರರಿಗೆ ರಕ್ತದಾನದಿಂದ ಒತ್ತಡ ಕಡಿಮೆಯಾಗಿ ಭಾವನಾತ್ಮಕ ಆರೋಗ್ಯ ಸುಧಾರಣೆ ಆಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಬಾಬುರಾಯ ಆಚಾರ್ಯ, ಕಲಾವಿದ ವಾಸುದೇವ ಶೆಟ್ಟಿಗಾರ, ಭಜನೆ ಸತ್ಕಾರ್ಯದಲ್ಲಿ ತೊಡಗಿಸಿಕೊಂಡ ರಾಜೀವ್ ದೇವಾಡಿಗ, ರಕ್ತದಾನಿ ಶರತ್ ಕಾಂಚನ್ ಆನಗಳ್ಳಿ, ಇವರನ್ನು ಸನ್ಮಾನಿಸಲಾಯಿತು.

ವಕ್ವಾಡಿ ಫ್ರೆಂಡ್ಸ್ (ರಿ) ವಕ್ವಾಡಿ ಇದರ ಅಧ್ಯಕ್ಷರಾದ ನವೀನ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಂಕೆ ಸುವೃತ್ ಕುಮಾರ್ ಕಾರ್ಕಳ ರಕ್ತದಾನಕ್ಕೆ ಚಾಲನೆ ನೀಡಿದರು. ಮಣಿಪಾಲ ತಪೋವನ ಲೈಫ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್  ಎಂಡಿ ಶ್ರೀಮತಿ ಡಾ. ವಾಣಿಶ್ರೀ ಐತಾಳ್ ಸಭೆಯಲ್ಲಿ ಉಪಸ್ಥಿತರಿದ್ದರು. ಕೀರ್ತಿ ಕುಮಾರ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಮೂಕಾಂಬಿಕಾ ಸ್ವಾಗತಿಸಿದರು. ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಶೆಟ್ಟಿಗಾರ್ ವಕ್ವಾಡಿ ವಂದಿಸಿದರು.

Related Articles

Back to top button
error: Content is protected !!