11 ವರ್ಷದ ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿ ಕೊಲೆ, ಆರೋಪಿ ಮಹಜರು ವೇಳೆ ಓಡಿ ಹೋಗಲು ಪ್ರಯತ್ನಿಸಿ ಕಾಲಿಗೆ ಗುಂಡೇಟು
Views: 41
ಕನ್ನಡ ಕರಾವಳಿ ಸುದ್ದಿ: 11 ವರ್ಷದ ಬಾಲಕಿಯನ್ನು ಅಪಹರಣ ಮಾಡಿ ಲೈಂಗಿಕ ದೌರ್ಜನ್ಯವೆಸಿಗಿ ಕೊಲೆ ಮಾಡಿದ್ದ ನೀಚ ಕೃತ್ಯ ನವದೆಹಲಿಯಲ್ಲಿ ವರದಿಯಾಗಿತ್ತು.
ಹೇಯ ಕೃತ್ಯವನ್ನು ನಡೆಸಿದ ಕ್ಯಾಬ್ ಚಾಲಕನ ಕಾಲಿಗೆ ಗುಂಡು ಹಾರಿಸಿದ ದೆಹಲಿ ಪೊಲೀಸರು ಸದ್ಯ ಇವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಲ್ಲುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿಸಿದ ನಂತರ ಸ್ಥಳ ಮಹಜರು ಮಾಡಲು ಬಲ್ಲುವನ್ನು ಕೃತ್ಯವೆಸೆಗಿದ ಜಾಗಕ್ಕೆ ಕರದುಕೊಂಡು ಹೋದಾಗ, ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಲು ಆರೋಪಿ ಯತ್ನಿಸಿದ್ದಾನೆ. ಆಗ ಪೊಲೀಸರು ಓಡ ಬೇಡ ನಿಲ್ಲು..ನಿಲ್ಲು ಎಂದು ಹೇಳಿದರೂ ಕೇಳದೇ ಇದ್ದಾಗ ಪೊಲೀಸರು ಬಲ್ಲುವಿನ ಕಾಲಿಗೆ ಪಿಸ್ತೂಲಿನಿಂದ ಗುಂಡನ್ನು ಹಾರಿಸಿದ್ದಾರೆ.
ಪೊಲೀಸರ ಬಂದೂಕಿನಿಂದ ಹಾರಿದ ಗುಂಡು ಬಲ್ಲುವಿನ ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕುಸಿದು ಬಿದ್ದ ಆರೋಪಿಯನ್ನು ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ವೈದ್ಯರು ಗುಂಡೇಟಿನಿಂದ ಬಳಲುತ್ತಿರುವ ಆರೋಪಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆ ಹಿನ್ನಲೆ: ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಸೋಮವಾರ (ಜೂ.22) ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ದೂರನ್ನು ಆಧರಿಸಿ ಕಾರ್ಯಪ್ರವರ್ತರಾದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಬಲ್ಲು ಎಂಬ ಕ್ಯಾಬ್ ಚಾಲಕನ ಮೇಲೆ ಅನುಮಾನ ಬಂದಿದೆ. ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತನೇ ಮಗುವನ್ನು ಅಪಹರಣ, ಅತ್ಯಾಚಾರ ಹಾಗೂ ಕೊಲೆ ಮಾಡಿರುವುದು ತಿಳಿದು ಬಂದಿದೆ.
ಹಾಗೆಯೇ ಮಗುವಿನ ಶವವನ್ನು ಸುಮಾರು 20 ಕಿ.ಮೀ ದೂರದ ಕಾಡಿನಲ್ಲಿ ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಲ್ಲು ಮೇಲೆ ಈಗಾಗಲೇ ಸುಮಾರು 5 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.ನಂತರ ಸ್ಥಳ ಮಹಜರಿನ ವೇಳೆ ಓಡಿ ಹೋಗಲು ಪ್ರಯತ್ನಿಸಿ ಕಾಲಿಗೆ ಗುಂಡೇಟನ್ನು ತಿಂದಿದ್ದಾನೆ.






