ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾವು
Views: 36
ಕನ್ನಡ ಕರಾವಳಿ ಸುದ್ದಿ:ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿರುವ ದುರ್ಘಟನೆ ಸಾಗರ ತಾಲೂಕಿನ ಬರೂರು ಸಮೀಪದ ಗುತ್ತನಹಳ್ಳಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಗುತ್ತನಹಳ್ಳಿಯ ಬೈರೆಕೊಪ್ಪ ಮನೆಯ ಸತೀಶ್ ಅವರ ಪುತ್ರಿ ಜಾನವಿ (17) ಎಂದು ಗುರುತಿಸಲಾಗಿದೆ.
ಜಾನವಿ ಅವರು ಕಳೆದ ಸುಮಾರು ಎರಡು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಸಾಗರ, ಶಿವಮೊಗ್ಗ ಹಾಗೂ ಮಣಿಪಾಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 22ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು ಎಂದು ತಿಳಿದು ಬಂದಿದೆ.
ಜಾನವಿ ಅವರು ಮೆದುಳು ಜ್ವರದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅವರು ತಮ್ಮ ಅಜ್ಜಿ ಮನೆಯಲ್ಲಿ ಇದ್ದು ಸಾಗರ ಸಮೀಪದ ಲಿಂಗದನಹಳ್ಳಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಪ್ರಥಮ ಪಿಯುಸಿ ವ್ಯಾಸಂಗ ಆರಂಭಿಸಲು ಸಿದ್ಧರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಕಾಲೇಜಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಉತ್ತಮ ಭವಿಷ್ಯದ ಕನಸು ಕಂಡಿದ್ದ ವಿದ್ಯಾರ್ಥಿನಿಯ ಅಕಾಲಿಕ ನಿಧನ ಬಹಳಷ್ಟು ಕುಟುಂಬಸ್ಥರಿಗೆ ,ಸ್ನೇಹಿತರಿಗೆ , ಊರಿನವರಿಗೆ ನೋವುಂಟು ಮಾಡಿದೆ.






