ಯಡಿಯೂರಪ್ಪ ವಿರೋಧಿ ಬಣ ಬಿಜೆಪಿಯ ಒಳಗೆ ಮತ್ತಷ್ಟು ಆಕ್ಟಿವ್: ಯತ್ನಾಳ್ ಮತ್ತೆ ರಣಕಹಳೆ!

Views: 1
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ಕರ್ನಾಟಕ ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ಬಳಿಕ, ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದರು. ಈಗ ಮತ್ತೊಮ್ಮೆ ತಮ್ಮ ಆಕ್ರೋಶವನ್ನು, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಹೆಸರು ಹೇಳದೆ ಹೊರ ಹಾಕಿದ್ದಾರೆ.
ಅಂದಹಾಗೆ ಇಂದು ಕಲ್ಲಡ್ಕಕ್ಕೆ ತೆರಳುವ ಮಾರ್ಗ ನಡುವೆ ಹಾಸನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ಮೋದಿಯವರ ಹೆಸರಲ್ಲೇ, ಕರ್ನಾಟಕದಲ್ಲಿ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ ಕೆಲವರು ನಾನು & ನಮ್ಮ ಅಪ್ಪ ಕೂಡಿ ಹೆಚ್ಚು ಸೀಟ್ ಗೆದ್ದಿದ್ದೀವಿ ಅಂತಾ ಹೇಳಲಿದ್ದಾರೆ, ಎನ್ನುವ ಮೂಲಕ ಲೋಕಸಭೆ ಚುನಾವಣೆ ಆರಂಭಕ್ಕೂ ಮೊದಲು ಕಿಡಿ ಹೊತ್ತಿಸಿದ್ದಾರೆ. ಅಲ್ಲದೆ ಇನ್ನೂ ಅನೇಕ ರೀತಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ ಯತ್ನಾಳ್.
ಹಾಗೇ ತಮ್ಮ ಮಾತು ಮುಂದುವರಿಸಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದ ಯತ್ನಾಳ್. ಕರ್ನಾಟಕದ ಸ್ಥಿತಿ ಕೇಂದ್ರದ ನಾಯಕರಿಗೆ ಕೂಡ, ಚೆನ್ನಾಗಿ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ. ಹಾಗೇ ಆರ್. ಅಶೋಕ್ ಅವರ ಪರವಾಗಿ ಕೂಡ ಬ್ಯಾಟ್ ಬೀಸುವ ಮೂಲಕ, ಬಿಜೆಪಿ ಒಳಗೆ ಈಗ ಬಣ ರಾಜಕೀಯ ನಡೆಯುತ್ತಿದೆಯಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವತಃ ತಮ್ಮ ಪಕ್ಷದವರ ವಿರುದ್ಧವೇ ಆರೋಪಗಳನ್ನು ಮಾಡಿ, ಆಕ್ರೋಶ ಹೊರಹಾಕುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇದೇ ರೀತಿ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈಗಲೂ ಹಾಗೆಯೇ ಮಾತನಾಡಿದ್ದು, ಕರ್ನಾಟಕ ಬಿಜೆಪಿಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಇದೆಲ್ಲಾ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋ ಟೆನ್ಷನ್ ಬಿಜೆಪಿ ಕೇಂದ್ರ ನಾಯಕರಿಗೆ ಕೂಡ ಶುರುವಾಗುವಂತೆ ಮಾಡಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಹೀಗಾಗಿ 2024ರ ಚುನಾವಣೆ ಸಾಕಷ್ಟು ಸವಾಲಿನಿಂದ ಕೂಡಿದೆ. ಈ ಸಂದರ್ಭದಲ್ಲಿ ಹೀಗೆ, ಕರ್ನಾಟಕ ಬಿಜೆಪಿ ನಾಯಕರ ನಡುವೆ ವಾರ್ ಶುರುವಾಗಿರುವುದು ಮತ್ತಷ್ಟು ತಲೆನೋವು ತರಿಸುತ್ತಿದೆ. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರೋಧಿ ಬಣ ಬಿಜೆಪಿಯ ಒಳಗೆ ಮತ್ತಷ್ಟು ಆಕ್ಟಿವ್ ಆಗಿದೆ ಅನ್ನೋ ಆರೋಪಗಳು ಕೂಡ ಕೇಳಿಬರುತ್ತಿವೆ. ಇದನ್ನೆಲ್ಲ ನಿಭಾಯಿಸಿಕೊಂಡು ಕರ್ನಾಟಕದ ಅಖಾಡದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಚಾಲೆಂಜ್ ಇದೀಗ ಬಿಜೆಪಿಗೆ ಎದುರಾಗಿದೆ.






