ಜನಮನ

40 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಮಾವನನ್ನೇ ಕೊಂದ ಅಳಿಯ!

Views: 207

ಕನ್ನಡ ಕರಾವಳಿ ಸುದ್ದಿ: ತನ್ನ ಮಾವನ ಹೆಸರಿನಲ್ಲಿ ಜೀವವಿಮೆ ಹಣ ಪಡೆದುಕೊಳ್ಳಲು ಬದುಕಿದ್ದ ಮಾವನನ್ನೇ ಹತ್ಯೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಇಮಾಮ್ ನಗರದ 32 ವರ್ಷದ ದುಗ್ಗೇಶ್ ಕೊಲೆಯಾದ ವ್ಯಕ್ತಿ. ಹಣ್ಣಿನ ವ್ಯಾಪಾರ, ಆಟೋ ಚಾಲಕನಾಗಿದ್ದ ಅಳಿಯ ಗಣೇಶ (24) ಹತ್ಯೆ ಮಾಡಿದ ಆರೋಪಿ.

ಈತನಿಗೆ ನೆರವು ನೀಡಿದ ಸ್ನೇಹಿತರಾದ ಅನಿಲ್ (18), ಶಿವಕುಮಾರ್ (25) ಮಾರುತಿ (24) ಯನ್ನು ಕೊಲೆ ಆರೋಪದಡಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಡೆದ ಘಟನೆಯ ಹಿನ್ನೆಲೆ: ಕೊಲೆಯಾದ ದುಗ್ಗೇಶನ ತಮ್ಮ ಗೋಪಿ, ಆರೋಪಿ ಗಣೇಶನ ಬಳಿ ಬಡ್ಡಿಯಂತೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಇದನ್ನು ತೀರಿಸಲಾಗದೆ ಆತ ಊರು ಬಿಟ್ಟಿದ್ದ. ದುಗ್ಗೇಶ್ ಜೊತೆ ಗೋಪಿ ಉತ್ತಮ ಒಡನಾಟ ಹೊಂದಿದ್ದು, ಆರೋಪಿಗೆ ಗೊತ್ತಿತ್ತು. ಹೀಗಾಗಿ, ಆತ ಸಾಲ ತೀರಿಸಲು ಸೂಚಿಸಿದ್ದ. ಹಣ ವಾಪಸ್ಗಾಗಿ ಆರೋಪಿ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ದುಗ್ಗೇಶ್ನ ಹೆಸರಿನಲ್ಲಿ ಜೀವವಿಮೆ ಮಾಡಿದ್ದಾರೆ. ಬಳಿಕ ಕೊಲೆ ಮಾಡಿ ಹಣ ಡ್ರಾ ಮಾಡಿಕೊಳ್ಳಲು ಸ್ಕೆಚ್ ಹಾಕಿದ್ದಾರೆ.

ಅನಾರೋಗ್ಯ ಪೀಡಿತನಾದ  ದುಗ್ಗೇಶ್  ಇನ್ನೊಂದು ವರ್ಷದಲ್ಲಿ ಸಾಯುತ್ತಾನೆ. ಈತನ ಹೆಸರಿನಲ್ಲಿ ಜೀವವಿಮೆ ಮಾಡಿಸಿ, ಹಣ ಪಡೆಯಲು ಅಳಿಯ ಗಣೇಶ್ ಸ್ನೇಹಿತರೊಂದಿಗೆ ಸೇರಿ ಯೋಜನೆ ರೂಪಿಸಿದ್ದಾನೆ. ಅದರಂತೆಯೇ ಆರೋಪಿಗಳು ದುಗ್ಗೇಶ್ನನ್ನು ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಮೃತ ದುಗ್ಗೇಶ್ ತಾಯಿ ಹುಲಿಗೆಮ್ಮ ಹೇಳುವಂತೆ, ಗಣೇಶ್ ಒಂದು ಇನ್ಶುರೆನ್ಸ್ ಬಾಂಡ್ ಮಾಡಿಸಿದ್ದ. ಬ್ಯಾಂಕ್ ಅಕೌಂಟ್ ಕೂಡ ಮಾಡಿಸಿ ದುಗ್ಗೇಶ್ ನಿಂದ ಸಹಿ ಮಾಡಿಸಿಕೊಂಡಿದ್ದ. ಅಲ್ಲದೇ ಖಾಲಿ ಚೆಕ್ ಪಡೆದಿದ್ದ. ಸಾಲ ಕೊಡೆಸುತ್ತೇನೆ ಎಂದು ನಂಬಿಸಿದ್ದ. ನನ್ನನ್ನು ನಾಮಿನಿ ಮಾಡಿದ್ದ. ದುಗ್ಗೇಶ್ ಮೃತಪಟ್ಟ ಬಳಿಕ ಆತನ ಮರಣ ಪ್ರಮಾಣ ಪತ್ರ ನೀಡಿ, ಇನ್ಶುರೆನ್ಸ್ ಹಣ ಕ್ಲೇಮ್ ಮಾಡಬೇಕು. ಅದು ನನ್ನ ಅಕೌಂಟ್ಗೆ ಜಮಾ ಆಗುತ್ತದೆ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ದುಗ್ಗೇಶ್ ಕೊಲೆ ಮಾಡಿ ಶವವನ್ನು ಮೃತ ವ್ಯಕ್ತಿಯ ಮನೆಯಲ್ಲಿ ತಂದು ಹಾಕಿ ಹೋಗಲಾಗಿದೆ. ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆರೋಪಿಗಳಾದ ಗಣೇಶ, ಅನಿಲ್, ಶಿವಕುಮಾರ್, ಮಾರುತಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಆಕ್ಸಿಸ್ ಬ್ಯಾಂಕ್ನಲ್ಲಿ ಇನ್ಶುರೆನ್ಸ್ ಬಾಂಡ್ ಮಾಡಿಸಿದ್ದು , 40 ಲಕ್ಷ ರೂಪಾಯಿ ಹಣಕ್ಕಾಗಿ ಹತ್ಯೆ ಮಾಡಿದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

Related Articles

Back to top button