ಪ್ರಿಯಕರನೊಂದಿಗೆ ಸೇರಿ ಪತಿಯ ಭೀಕರ ಹತ್ಯೆ

Views: 115
ಕನ್ನಡ ಕರಾವಳಿ ಸುದ್ದಿ:ಮೊದಲು ಒಬ್ಬನೊಂದಿಗೆ ಪ್ರೇಮ ವಿವಾಹ ನಂತರ ವಿಶ್ವಾಸದ್ರೋಹ.. ಇದಾದ ನಂತರ ಮತ್ತೊಬ್ಬ ಪ್ರೇಮಿಯೊಂದಿಗೆ ಸೇರಿಕೊಂಡು ಪತಿಯ ಕ್ರೂರ ಹತ್ಯೆ
ಹಂತಕಿ ಪತ್ನಿಯ ಹೆಸರು ಮುಸ್ಕಾನ್. ಆದರೆ ಆಕೆ ಹೆಸರಿಗೆ ಮಾತ್ರ ಮುಸ್ಕಾನ್.. ಗಂಡನನ್ನು ಕೊಂದು ಶವವನ್ನು ತುಂಡು ತುಂಡಾಗಿಸಿ ಡ್ರಮ್ನಲ್ಲಿ ಹಾಕಿ, ಅದರ ಬಾಯನ್ನು ಸಿಮೆಂಟ್ನಿಂದ ಮುಚ್ಚಿಟ್ಟಿದ್ದಳು
ಶವವನ್ನು ಕತ್ತರಿಸಿದ ನಂತರ ಮಾರುಕಟ್ಟೆಯಿಂದ ಹೊಸ ಡ್ರಮ್ ಒಂದನ್ನು ಖರೀದಿಸಿ ತಂದು ಅದರಲ್ಲಿ ಶವದ ತುಂಡುಗಳನ್ನು ಹಾಕಿ ಅದರ ಬಾಯಿಯನ್ನು ಸಿಮೆಂಟ್ನಿಂದ ಸೀಲ್ ಮಾಡಿರುವುದಾಗಿ ಇಬ್ಬರೂ ಆರೋಪಿಗಳು ಹೇಳಿದ್ದಾರೆ. ಇದಾದ ನಂತರ ಮಗಳನ್ನು ತಾಯಿ ಮನೆಯಲ್ಲಿ ಬಿಟ್ಟ ಮುಸ್ಕಾನ್ ತನ್ನ ಮನೆಗೆ ಬೀಗ ಜಡಿದಿದ್ದಾಳೆ. ನಂತರ ಗಂಡನ ಜೊತೆ ಸುತ್ತಾಡಲು ಹೋಗುತ್ತಿರುವುದಾಗಿ ಹೇಳಿ ಅಲ್ಲಿಂದ ಕಣ್ಮರೆಯಾಗಿದ್ದಾಳೆ.
ಹತ್ಯೆಯ ನಂತರ ಹನಿಮೂನ್: ತಾನು ಗಂಡನೊಂದಿಗೆ ಹಿಮಾಚಲ್ಗೆ ಸುತ್ತಾಡಲು ಹೋಗುತ್ತಿರುವುದಾಗಿ ಮುಸ್ಕಾನ್ ತನ್ನ ತವರು ಮನೆ ಹಾಗೂ ಗಂಡನ ಮನೆಯವರಿಗೆ ಹೇಳಿದ್ದಳು. ಆದರೆ, ಆಕೆ ತನ್ನ ಗಂಡನನ್ನು ಕೊಲೆ ಮಾಡಿ ಪ್ರಿಯಕರನೊಂದಿಗೆ ಮಜಾ ಮಾಡುತ್ತಿದ್ದಾಳೆ ಎಂಬುದರ ಕಿಂಚಿತ್ತೂ ಸುಳಿವು ಅವರಿಗೆ ಇರಲಿಲ್ಲ. ಹತ್ಯೆಯ ನಂತರ ಮುಸ್ಕಾನ್ ಹಾಗೂ ಸಾಹಿಲ್ ಮನಾಲಿಯಲ್ಲಿ ಕೆಲ ದಿನ ಕಳೆದಿದ್ದಾರೆ. ಈ ಸಮಯದಲ್ಲಿ ಹೋಟೆಲ್ನ ಕೋಣೆಯ ಚಿತ್ರಗಳನ್ನು ಆಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಳು. ಇದಲ್ಲದೇ ಸೌರಭ್ನ ಫೋನ್ ಅನ್ನು ತನ್ನ ಜೊತೆಗೆ ತಂದಿದ್ದ ಆಕೆ, ಆತನ ವಾಟ್ಸ್ ಆ್ಯಪ್ ನಂಬರ್ನಿಂದ ಕೆಲವೊಮ್ಮೆ ಉತ್ತರಿಸಿ ಯಾರಿಗೂ ಸಂಶಯ ಬರದಂತೆ ವರ್ತಿಸುತ್ತಿದ್ದಳು.
ತಾಯಿಗೆ ಹೇಳಿದ್ದಳು ಮುಸ್ಕಾನ್: ಸೌರಭ್ನ ಅಕೌಂಟಿನಲ್ಲಿದ್ದ 6 ಲಕ್ಷ ರೂಪಾಯಿ ಲಪಟಾಯಿಸುವುದು ಮುಸ್ಕಾನ್ನ ಪ್ಲಾನ್ ಆಗಿತ್ತು. ಸೌರಭ್ನ ಅಕೌಂಟಿನಿಂದ ದುಡ್ಡು ಹೇಗೆ ತೆಗೆಯುವುದು ಎಂದು ಆಕೆ ತಾಯಿಗೂ ಕೇಳಿದ್ದಳು. ಪತಿಯನ್ನು ಕೊಂದಿರುವುದಾಗಿ ಈ ಸಮಯದಲ್ಲಿ ಮುಸ್ಕಾನ್ ತಾಯಿಯ ಮುಂದೆ ಬಾಯಿ ಬಿಟ್ಟಿದ್ದಳು. ಅಲ್ಲದೇ ಶವವನ್ನು ಡ್ರಮ್ನಲ್ಲಿ ಹಾಕಿ ಇಟ್ಟಿರುವುದಾಗಿಯೂ ಆಕೆ ಹೇಳಿಕೊಂಡಿದ್ದಳು. ಇದರಿಂದ ಆಘಾತಕ್ಕೊಳಗಾದ ತಾಯಿ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿದ್ದಳು.
ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಮುಸ್ಕಾನ್ಳ ವಿಚಾರಣೆ ನಡೆಸಿದ್ದಾರೆ. ಗಾಬರಿಯಲ್ಲಿ ಆಕೆ ಏನೇನೋ ಸುಳ್ಳು ಹೇಳಿ ಪಾರಾಗಲು ನೋಡಿದ್ದಾಳೆ. ಆದರೆ ಸಾಹಿಲ್ ಮತ್ತು ಆಕೆಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಇಬ್ಬರೂ ವಿಭಿನ್ನ ಹೇಳಿಕೆ ನೀಡಿ ಸಿಕ್ಕಿ ಬಿದ್ದಿದ್ದಾರೆ. ನಂತರ ಕೊಲೆಯ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಆಗ ಸ್ಥಳದಲ್ಲಿ ಸಿಕ್ಕ ಡ್ರಮ್ ಅನ್ನು ಪೊಲೀಸರು ಪೋಸ್ಟ್ ಮಾರ್ಟಮ್ಗೆ ಕಳುಹಿಸಿದ್ದಾರೆ. ಅಲ್ಲಿ ಡ್ರಮ್ ಅನ್ನು ಒಡೆದು ಶವದ ತುಂಡುಗಳನ್ನು ಹೊರ ತೆಗೆಯಲಾಗಿದೆ. ಸದ್ಯ ಸೌರಭ್ನ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರೂ ಪ್ರೇಮಿಗಳನ್ನು ಬಂಧಿಸಿದ್ದಾರೆ.