21 ರೂಪಾಯಿ ಹಿಡಿದು ಮನೆಬಿಟ್ಟ ಕುಮುಟಾದ ರಾಘವೇಂದ್ರ ದ್ವಿಗಿ ಟಿ20 ವಿಶ್ವಕಪ್ ಗೆಲ್ಲಲು ಕಾರಣೀಭೂತರು!

Views: 314
ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಜಯ ಸಾಧಿಸಿದೆ. ಈ ಗೆಲುವಿಗೆ ಟೀಂ ಇಂಡಿಯಾದ ಆಟಗಾರರು ಪ್ರಮುಖ ರೂವಾರಿಗಳಾದರೆ, ತೆರೆ ಹಿಂದೆ ಅನೇಕ ರೂವಾರಿಗಳಿದ್ದಾರೆ. ಆದರೆ ಅನೇಕರಿಗೆ ಕೆಲವರ ಬಗ್ಗೆ ತಿಳಿದಿಲ್ಲ. ಅಂತಹದರಲ್ಲಿ ಕರ್ನಾಟಕದ ಕುಮುಟಾದ ಮೂಲದ ಈ ಅದ್ಭುತ ಪ್ರತಿಭೆ ಕೂಡ ಟಿ20 ವಿಶ್ವಕಪ್ ಗೆಲ್ಲಲು ಕಾರಣೀಭೂತರು.
ರಾಘವೇಂದ್ರ ದ್ವಿಗಿ. ಹಣೆಯಲ್ಲಿ ಕೆಂಪು ಬಣ್ಣದ ತಿಲಕವನ್ನಿಟ್ಟುಕೊಂಡು ಸದಾ ನಗುಮೊಗದಲ್ಲಿರುವ ಈ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಮೂಲದವರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ರಾಘವೇಂದ್ರ ದ್ವಿಗಿ ಟೀಂ ಇಂಡಿಯಾದ ಟಿ20 ವಿಶ್ವಕಪ್ ಗೆಲ್ಲಲು ಇವರ ಪಾತ್ರ ಮಹತ್ವವಾದುದು. ಏಕೆಂದರೆ ಇವರಿಂದಾನೇ ಟೀಂ ಇಂಡಿಯಾದ ಬಹುತೇಕ ಬ್ಯಾಟ್ಸ್ಮನ್ಗಳು ಚೆಂಡು ಅಭ್ಯಾಸ ಮಾಡೋದು ಮತ್ತು ವೇಗದ ಚೆಂಡನ್ನು ಎದುರಿಸಲು ಕಲಿಯೋದು.

ಸಾಧಿಸುವ ಹಂಬಲವಿದ್ದರೆ ಮುಂದೊಂದು ದಿನ ಗೆಲವು ಖಂಡಿತಾ ತನ್ನದಾಗುತ್ತದೆ ಎಂಬುವುದು ರಾಘವೇಂದ್ರ ದ್ವಿಗಿ ಜೀವನಕ್ಕೆ ಸರಿ ಹೊಂದುವ ಮಾತು. ಏಕೆಂದರೆ ಈ ಅಸಾಮಾನ್ಯ ಪ್ರತಿಭೆಗೆ ಕ್ರಿಕೆಟ್ ಎಂದರೆ ಇನ್ನಿಲ್ಲದ ಹುಚ್ಚು. ಹೈಸ್ಕೂಲ್ನಲ್ಲಿದ್ದಾಗ ಸದಾ ಗ್ರೌಂಡ್ನಲ್ಲಿ ಕಾಲ ಕಳೆಯುತ್ತಿದ್ದ ಈತ ಮುಂದೊಂದು ದಿನ ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಆಗುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲವಂತೆ.
ಅಚ್ಚರಿ ಸಂಗತಿ ಎಂದರೆ ರಾಘವೇಂದ್ರ ದ್ವಿಗಿ ಕ್ರಿಕೆಟ್ ಲೋಕದಲ್ಲಿ ಮೆರೆಯಬೇಕು ಎಂದು ಕನಸು ಕಂಡ ಹುಡುಗ. ಮುಂದೊಂದು ದಿನ 21 ರೂಪಾಯಿಗೆ ಮನೆ ಬಿಟ್ಟಿದ್ದರಂತೆ. ಸಾಕಷ್ಟು ಕಷ್ಟ, ನಷ್ಟ ಅನುಭವಿಸಿ ಕೊನೆಗೆ ರಾಘವೇಂದ್ರ ದ್ವಿಗಿ 24 ವರ್ಷಗಳ ಬಳಿಕ ಟೀಂ ಇಂಡಿಯಾ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆದರು.
2011ರಲ್ಲಿ ರಾಘವೇಂದ್ರ ದ್ವಿಗಿ ಭಾರತ ತಂಡವನ್ನು ಸೇರುತ್ತಾರೆ. ಆ ನಂತರ ಟೀಂ ಇಂಡಿಯಾದ ಆಟಗಾರರಿಗೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಇಲ್ಲಿಯವರೆಗೆ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. 150ಕೆಪಿಎಚ್ ವೇಗದಲ್ಲಿ ಎಸೆಯುವ ಸಾಮರ್ಥ್ಯ ಅವರಿಗಿದೆ. ಅಚ್ಚರಿ ಸಂಗತಿ ಎಂದರೆ ಇಷ್ಟು ವೇಗವಾಗಿ ಚೆಂಡು ಎಸೆಯುವ ಮತ್ತೊಬ್ಬ ಥ್ರೋಡೌನ್ ಸ್ಪೆಷಲಿಸ್ಟ್ ಜಗತ್ತಿನಲ್ಲೇ ಇಲ್ಲವಂತೆ.
ಇಂದು ಅನೇಕರು ಕ್ರಿಕೆಟ್ ಪ್ರಿಯರು ರೋಹಿತ್ ಲೀಲಾಜಾಲವಾಗಿ ಪೆವಿಲಿಯನತ್ತ ಅಟ್ಟುವ ಸಿಕ್ಸ್ ನೋಡಿ ವಾವ್ ಅನ್ನುತ್ತಾರೆ. ಆತನನ್ನು ಹಿಟ್ ಮ್ಯಾನ್ ಎಂದು ಕರೆಯುತ್ತಾರೆ. ಕೊಹ್ಲಿ ಬಾರಿಸುವ ಸಿಕ್ಸ್, ಫೋರ್ಗೆ ಶಿಳ್ಳೆ ಹೊಡೆಯುತ್ತಾರೆ. ಕಿಂಗ್ ಕೊಹ್ಲಿ ಎಂದು ಕರೆಯುತ್ತಾರೆ. ಆದರೆ ಅವರನ್ನು ಪ್ರಯೋಗಗಳಿಗೆ ಒಳಪಡಿಸಿ ಅದ್ಭುತ ಬ್ಯಾಟ್ಸ್ಮನ್ಗಳನ್ನಾಗಿ ಮಾಡಿದ ಕ್ರೆಡಿಟ್ ನಿಜವಾಗಿಯೂ ರಾಘವೇಂದ್ರ ದ್ವಿಗಿಗೆ ಸಲ್ಲಬೇಕು.

ತಂದೆಗೆ ಕ್ರಿಕೆಟ್ ಎಂದರೆ ಅಲರ್ಜಿ. ಸದಾ ಕ್ರಿಕೆಟ್ ಎಂದು ಎದೆ ಬಡಿದುಕೊಳ್ಳುವ ರಾಘವೇಂದ್ರರನ್ನು ಕಂಡ ತಂದೆ ಒಂದು ದಿನ ಮಗನನ್ನು ಪ್ರಶ್ನಿಸುತ್ತಾರೆ. ‘ನಿನಗೆ ಓದು, ಜೀವನ ಮುಖ್ಯವೋ, ಕ್ರಿಕೆಟ್ ಮುಖ್ಯವೋ’’ ಎಂದು. ಅದಕ್ಕೆ ರಾಘವೇಂದ್ರರವರು ಕೈಯಲ್ಲೊಂದು ಬ್ಯಾಗ್, ಕೈಯಲ್ಲಿ 21 ರೂಪಾಯಿ ಹಿಡಿದುಕೊಂಡು ಮನೆ ಬಿಟ್ಟು ಹೊರಟು ಬಿಡುತ್ತಾರೆ.
ಕುಮಟಾದಿಂದ ಹೊರಟವರು ಹುಬ್ಬಳ್ಳಿ ಬಂದು ಸೇರುತ್ತಾರೆ. ಕೈಯಲ್ಲಿರುವ ₹21 ರೂಪಾಯಿ ಹಿಡಿದುಕೊಂಡು ಬಂದವರು ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಾರೆ. ಅಲ್ಲಿಂದ ಅವರನ್ನು ಗಮನಿಸಿ ಪೊಲೀಸರು ಓಡಿಸುತ್ತಾರೆ. ನಂತರ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. 10 ದಿನ ದೇವಸ್ಥಾನದಲ್ಲಿ ವಾಸ ಮಾಡುತ್ತಾರೆ. ನಂತರ ಅಲ್ಲಿಂದಲೂ ಹೋಗಬೇಕಾದ ಸ್ಥಿತಿ ಬಂದಾಗ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾರೆ.
ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡದಲ್ಲಿ ವಾಸಿಸುತ್ತಾರೆ. ಒಂದೆರಡಲ್ಲ ಬರೋಬ್ಬರಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾ ಕಾಲ ಕಳೆಯುತ್ತಾರೆ ರಾಘವೇಂದ್ರ. ಒಂದೆಡೆ ಕ್ರಿಕೆಟ್ ಕನಸು ಮತ್ತೊಂದೆಡೆ ದಾರಿ ಹುಡುಕುತ್ತಿರುವ ರಾಘ್ರವೇಂದ್ರ. ಈ ವೇಳೆ ಕಂಡ ಕನಸಿಗೆ ದೃಷ್ಟಿ ಬಿತ್ತು ಎಂಬಂತೆ ಅವರ ಕನಸಿಗೆ ಕಲ್ಲು ಬೀಳುತ್ತದೆ. ಕಾರಣ ಬಲಗೈ ಮುರಿಯುತ್ತದೆ. ಆದರೂ ಇದಾವುದಕ್ಕೆ ಕೊರಗದೆ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾರೆ.
ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾರೆ. ಈ ವೇಳೆ ಅಲ್ಲೇ ಪರಿಚಯವಾದ ಸ್ನೇಹಿತನೋರ್ವ ಬೆಂಗಳೂರು ಬಸ್ ತೋರಿಸುತ್ತಾನೆ. ಏನು ತಿಳಿಯದೆ ಬೆಂಗಳೂರಿಗೆ ಬಂದ ರಾಘವೇಂದ್ರ ಅವರಿಗೆ ದಾರಿ ತೋರಿಸುತ್ತದೆ. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯಲು ಶುರು ಮಾಡುತ್ತಾರೆ.
ರಾಘವೇಂದ್ರ ದ್ವಿಗಿ ಅವರ ಪರಿಶ್ರಮ, ಕ್ರಿಕೆಟ್ ಹುಚ್ಚು ಇವೆಲ್ಲವು ಮುಂದೊಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತದೆ. ಬಳಿಕ ತಿಲಕ್ ನಾಯ್ಡುರವರು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ರಾಘವೇಂದ್ರ ಅವರನ್ನು ಪರಿಚಯಿಸುತ್ತಾರೆ.
ರಾಘವೇಂದ್ರ ಅವರಿಗೆ ಜಾವಗಲ್ ಶ್ರೀನಾಥ್ ಪರಿಚಯವಾದ ಬಳಿಕ ದಿಕ್ಕೇ ಬದಲಾಯಿತು. ಕಾರಣ ಅವರನ್ನು ಕರ್ನಾಟಕ ರಣಜಿ ತಂಡದ ಜೊತೆ ಸೇರಿಸುತ್ತಾರೆ. ಕರ್ನಾಟಕ ತಂಡದದಲ್ಲಿ ರಾಘು ಕೆಲಸ ಮಾಡುತ್ತಾರೆ. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಾರೆ. ಅಚ್ಚರಿ ಸಂಗತಿ ಎಂದರೆ 3-4 ವರ್ಷ ಒಂದೇ ಒಂದು ರೂಪಾಯಿ ಹಣ ಪಡೆಯದೆ ಕೆಲಸ ಮಾಡಿದ್ದಾರೆ ರಾಘವೇಂದ್ರ.
ಇಷ್ಟೆಲ್ಲಾ ಆದ ಬಳಿಕ ರಾಘವೇಂದ್ರ ದ್ವಿಗಿಯವರು NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾರೆ. ಬಳಿಕ NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾರೆ. ಹೀಗೆ ಅಭ್ಯಾಸ ಮಾಡಿಸಿ ಅವರನ್ನು ಉತ್ತಮ ಬ್ಯಾಟ್ಸ್ಮನ್ಗಳಾಗಿ ರೂಪಿಸುತ್ತಾರೆ. ಜೊತೆಗೆ ಅವರಿಗೆ ಅಷ್ಟೇ ಆತ್ಮೀಯರಾಗಿ ಬಿಡುತ್ತಾರೆ.
ಮುಂದೊಂದು ದಿನ ಸಚಿನ್ ತೆಂಡೂಲ್ಕರ್ ಕಣ್ಣಿಗೆ ರಾಘವೇಂದ್ರ ಬೀಳುತ್ತಾರೆ. 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ರಾಘವೇಂದ್ರ ನೇಮಕವಾಗುತ್ತಾರೆ. ಅಲ್ಲಿಂದ ಬಳಿಕ ಸುಮಾರು 13 ವರ್ಷಗಳ ಕಾಲ ಕೆಲಸ ಮಾಡುತ್ತಾ. ನಂತರ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳಿಗೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಾ ಬಂದರು. ಈ ವರ್ಷ ಟಿ20 ವಿಶ್ವಕಪ್ನಲ್ಲಿ ರಾಘವೇಂದ್ರ ದ್ವಿಗಿಯವರ ಕೊಡುಗೆಯೂ ಅಪಾರವಿದೆ.






