ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಿದ ಕುಂದಾಪುರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ, ಮುಜುಗರ ತಪ್ಪಿಸಲು ಪತ್ರಕರ್ತರನ್ನೇ ಹೊರದಬ್ಬಿದರು!

Views: 221
ಕುಂದಾಪುರ: ಕಾಂಗ್ರೆಸ್ ಪಕ್ಷದ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕುಂದಾಪುರದಲ್ಲಿ ಶನಿವಾರ ನಡೆದಿದೆ.
ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಭಾಗಿಯಾಗಿದ್ದ ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮುಜುಗರ ತಪ್ಪಿಸಲು ಕಾಂಗ್ರೆಸ್ ಮುಖಂಡರು ಪತ್ರಕರ್ತರನ್ನು ಸಭೆಯಿಂದ ಹೊರ ನಡೆಯುವಂತೆ ಮನವಿ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದ ಕ್ಯಾಮರಾಮನ್ಗಳನ್ನು ಹಾಗೂ ವರದಿಗಾರರನ್ನು ಸಭೆಯಿಂದ ಹೊರದಬ್ಬಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ಈ ದುರ್ವರ್ತನೆ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿ, ಖಂಡಿಸಿದ್ದಾರೆ.
ಈ ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ ಕಾರ್ಯಾಧ್ಯಕ್ಷ ಕೊಳ್ಕೆಬೈಲು ಕಿಶನ್ ಹೆಗ್ಡೆ ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಗ್ರಹಿಸಿದೆ.
ಸಭೆಯಲ್ಲಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಚುನಾವಣೆ ಸಮಯದಲ್ಲಿ ಮಾತ್ರ ನಿಮಗೆ ಕಾರ್ಯಕರ್ತರ ನೆನಪಾಗುತ್ತದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದೇ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಮತ್ತೆ ಮತ್ತೆ ಸೋಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರು ಮುಖಂಡರ ಕುರಿತು ಹೇಳಿದ್ದೇನು?
ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಕಾರ್ಯಕರ್ತರೊಬ್ಬರು, ಇವತ್ತು ಬೂತ್ನಲ್ಲಿ ಒಬ್ಬ ಕಾರ್ಯಕರ್ತ ಇದ್ದಾನೋ ಸತ್ತಿಸದ್ದಾನೋ ಎಂಬುದನ್ನು ನಾಯಕರು ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಿ ಸಭೆಯಲ್ಲಿದ್ದ ಅಷ್ಟೂ ಕಾರ್ಯಕರ್ತರು ಸಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. ಮಂಗಳೂರಿನಲ್ಲಿ ಸಮಾವೇಶ ಇದೆ, ಚುನಾವಣೆ ಹತ್ತಿರಬರುತ್ತಿದೆ. ನಾವು ಕಾರ್ಯಕರ್ತರು ಕೆಲಸ ಮಾಡಬೇಕು. ಇವತ್ತು ನಿಮ್ಮ ಅನುದಾನ ಬೇಕಿಲ್ಲ ನಮಗೆ. ಯಾವುದೋ ಊರಿನಲ್ಲಿದ್ದ ಪಿಡಿಒಗಳನ್ನು ವರ್ಗಾವಣೆ ಮಾಡಿ ನಮ್ಮ ಪಂಚಾಯತ್ಗೆ ಹಾಕುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕರ್ತರ ನೋವು-ನಲಿವುಗಳನ್ನು ನೀವು ನಾಯಕರಾದವರು ಕೇಳುತ್ತಿಲ್ಲ. ಕುಂದಾಪುರದಲ್ಲಿರುವ ಎಲ್ಲಾ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮ ವಹಿಸಿ ದುಡಿದಿದ್ದೇವೆ. ಇಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ’ ಎಂದು ಕಾರ್ಯಕರ್ತ ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಇಷ್ಟೆಲ್ಲ ಆಗುತ್ತಿರುವಂತೆ ಮಾಧ್ಯಮ ಪ್ರತಿನಿಧಿಗಳ ಬಳಿ ಬಂದ ಕೆಲವು ಮುಖಂಡರು, ಇದು ಕಾರ್ಯಕರ್ತರ ಸಭೆ. ದಯವಿಟ್ಟು ಹೊರಗೆ ಹೋಗಿ ಎಂದು ವಿನಂತಿಸಿದ್ದಾರೆ. ಆದರೂ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರನ್ನು ಬಲವಂತದಿಂದ ಹೊರಗೆ ದಬ್ಬಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಇಷ್ಟೆಲ್ಲ ಆಗುತ್ತಿರುವಾಗ ಸಚಿವೆ ಹೆಬ್ಬಾಳ್ಕರ್ ಅವರು ಮೌನವಾಗಿ ವೇದಿಕೆ ಮೇಲೆ ಕುಳಿತು ಈ ಎಲ್ಲ ಬೆಳವಣಿಗೆಗೆ ಸಾಕ್ಷಿಯಾದರು.
ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಪಕ್ಷದ ಮುಖಂಡರುಗಳ ವಿಚಾರದಲ್ಲಿ ಮಾತನಾಡುತ್ತಿದ್ದಾಗ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದು ಸಭಾ ವೇದಿಕೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ವೇದಿಕೆಯಿಂದ ಇಳಿದು ಬಂದು ಮಾಧ್ಯಮದವರ ಕ್ಯಾಮೆರಾ ಚಿತ್ರೀಕರಣಕ್ಕೆ ಅಡ್ಡಗಟ್ಟಿ ತಳ್ಳಿದ್ದಾರೆ. ಇದರಿಂದ ಕೆಲ ಹೊತ್ತು ಸಂದಿಗ್ಧತೆ ವಾತಾವರಣ ಸೃಷ್ಟಿಯಾಯಿತು. ಇದೆಲ್ಲಾ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಹಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಸಹಿತ ಎರಡು ಬ್ಲಾಕ್ ಕಾಂಗ್ರೆಸ್ನ ಮುಖಂಡರುಗಳು ದುರ್ವರ್ತನೆ ತೋರಿದ ಮುಖಂಡನನ್ನು ತಡೆಯುವ ಯಾವುದೇ ಪ್ರಯತ್ನ ಮಾಡದೇ ಮೂಕ ಪ್ರೇಕ್ಷಕರಾಗಿ ವರ್ತಿಸಿದ್ದಾರೆ. ಬಳಿಕ ಸಚವೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ಮೊದಲಿಗೆ ಮಾಧ್ಯಮದವರನ್ನು ಹೊರಹೋಗಿ ಎಂದು ನೇರವಾಗಿ ಹೇಳುವ ಮೂಲಕ ಅವಮಾನಿಸಿದ್ದಾರೆ.
ಕಾರ್ಯಕರ್ತರು ಮಾತನಾಡುತ್ತಿರುವ ವೇಳೆ ವಿಡಿಯೋ ಚಿತ್ರೀಕರಣದ ವೇಳೆ ಮಾಧ್ಯಮದವರನ್ನು ತಳ್ಳಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿ ಹೊರದಬ್ಬಿದ್ದಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘವು ತೀವ್ರವಾಗಿ ಖಂಡಿಸಿ, ಪತ್ರಕರ್ತರನ್ನು ಸಭೆಗೆ ಕರೆಸಿ ಅವಮಾನ ಮಾಡಿದ್ದಕ್ಕೆ ಪ್ರಜಾಪ್ರಭುತ್ವದ ಅಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ತೀವ್ರವಾಗಿ ಖಂಡಿಸಿದೆ.