ಸಿದ್ದಾಪುರ: ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರೇಮಿ, ಆತ್ಮಹತ್ಯೆಗೆ ಯತ್ನಿಸಿದ ಯುವತಿ ಗಂಭೀರ

Views: 481
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ ಯುವಕ ಕೈಕೊಟ್ಟಿದ್ದಕ್ಕೆ ಯುವತಿಯೊಬ್ಬಳು ಇಲಿಗೆ ಹಾಕುವ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಅನುಷಾ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಿದ್ದಾಪುರದ ಬಟ್ಟೆ ಅಂಗಡಿಯಲ್ಲಿ ಕಳೆದ 2 ವರ್ಷಗಳಿಂದ ಕೆಲಸಮಾಡಿಕೊಂಡಿದ್ದಳು. ಆಕೆಯ ಅಣ್ಣ ಅರುಣ್ ಅವರ ಪಿಕಪ್ ವಾಹನದ ಚಾಲಕ ಹಳ್ಳಿಹೊಳೆ ನಿವಾಸಿ ಭರತ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದಾತ ಎಂದು ಆರೋಪಿಸಲಾಗಿದೆ.
ಭರತ್ ಅನುಷಾಳನ್ನು ಪ್ರೀತಿ ಮಾಡುತ್ತಿದ್ದು, ಮನೆಯವರಿಗೆ ವಿಷಯ ಗೊತ್ತಾಗಿದೆ. ಆರೋಪಿ ಭರತ ಕೆಲವೊಮ್ಮೆ ಅನುಷಾಳನ್ನು ಸಿದ್ದಾಪುರದಿಂದ ಆತನ ಬೈಕ್ ನಲ್ಲಿ ತಾರೆಕೊಡ್ಲು ಬಸ್ ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದನು, ಈ ಬಗ್ಗೆ ಮನೆಯವರು ಅನುಷಾಳಲ್ಲಿ ಕೇಳಿದಾಗ ಭರತ್ ನನ್ನನ್ನು ಮದುವೆ ಆಗುವನು ಎಂದಿದ್ದಳು.
ಭರತ್ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಅನುಷಾ ಜೂನ್ 11ರಂದು ಇಲಿಗೆ ಹಾಕುವ ವಿಷವನ್ನು ಸೇವಿಸಿದ್ದರಿಂದ ಮನೆಯವರು ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.