ಆರೋಗ್ಯ

ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಮುಚ್ಚಲು ಹೈಕೋರ್ಟ್ ತಡೆ

Views: 107

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಬಾಲ್ಕಿ ಮೂಲದ ಶ್ರೀಕಾಂತ್‌ ಅನಂತಾಚಾರ್ಯ ಜೋಶಿ ಸೇರಿದಂತೆ ಜನೌಷಧ ಕೇಂದ್ರಗಳ 16 ಮಾಲೀಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ಐ. ಅರುಣ್‌ ಅವರಿದ್ದ ನ್ಯಾಯಪೀಠ, ಅರ್ಜಿದಾರರಿಗೆ ಸೀಮಿತವಾಗಿ ಮಧ್ಯಂತರ ಆದೇಶ ನೀಡಿದೆ.

ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ವೈದ್ಯಕೀಯ ಆಡಳಿತಾಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಕ್ಕೆ ನೀಡಿರುವ ಅನುಮತಿ ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲರು, ಸರ್ಕಾರ ತಮ್ಮನ್ನು ವಾದವನ್ನು ಆಲಿಸದೆ, ವಿಚಾರಣೆ ನಡೆಸಿ ಮತ್ತು ಗಮನಕ್ಕೆ ತಾರದೆ, ತರಾತುರಿಯಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೆ, ಅರ್ಜಿದಾರರು, ಈ ಔಷಧ ಮಳಿಗೆ ಮೂಲಸೌಲಭ್ಯಗಳು, ಸಿಬ್ಬಂದಿ ವೇತನ, ಪೀಠೋಪಕರಣಗಳು, ಔಷಧಗಳ ದಾಸ್ತಾನು, ಕೇಂದ್ರದ ಕಾರ್ಯಾಚರಣೆಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದ್ದಾರೆ. ಜತೆಗೆ, ಕಾನೂನು ಬದ್ಧವಾಗಿ ಪರವಾನಿಗೆ ಪಡೆದುಕೊಳ್ಳಲಾಗಿದೆ ಎಂದರು.

ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಡಿಸಿರುವ ಆದೇಶ ಸಂವಿಧಾನ ಪರಿಚ್ಛೇದ 19(1)(ಜಿ)ರ ಅಡಿಯಲ್ಲಿ ಲಭ್ಯವಿರುವ ಜೀವಿಸುವ ಹಕ್ಕು, ಪರಿಚ್ಛೇದ 19ರ ಅಡಿಯಲ್ಲಿ ಬದುಕುವ ಹಕ್ಕಿಗೆ ವಿರುದ್ಧವಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಆಸ್ಪತ್ರೆಗಳಲ್ಲಿ ವೈದ್ಯರು ಹೊರ ಭಾಗದ ಮಳಿಗೆಗಳಿಂದ ಔಷಧಗಳನ್ನು ಖರೀದಿ ಮಾಡುವಂತೆ ರೋಗಿಗಳಿಗೆ ಸೂಚಿಸುವುದನ್ನು ನಿರ್ಬಂಧಿಸುವ ಸಲುವಾಗಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳು ಗುಣಮಟ್ಟದ ಜೆನರಿಕ್‌ ಔಷಧಗಳನ್ನು ಒದಗಿಸುವ ಗುರಿ ಹೊಂದಿವೆ.

ಜನೌಷಧ ಕೇಂದ್ರಗಳು ಶೇ.50 ರಿಂದ 90ರ ವರೆಗೂ ರಿಯಾಯಿತಿ ದರದಲ್ಲಿ ಔಷಧಗಳನ್ನು ಒದಗಿಸುತ್ತವೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವವರು, ಹಿರಿಯ ನಾಗರೀಕರು, ದಿನಗೂಲಿ ನೌಕರರು, ದೀರ್ಘಕಾಲದ ರೋಗಗಳಿಂದ ಬಳಲುತ್ತಿದ್ದು, ದಿನ ನಿತ್ಯದ ಔಷಧಗಳ ಅಗತ್ಯವಿರುವವರಿಗೆ ಈ ಸೇವೆ ಅತ್ಯಂತ ಸಹಕಾರಿಯಾಗಿದೆ. ಅಂತಹ ಔಷಧ ಮಳಿಗೆಗಳನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆರೋಗ್ಯ ಹಕ್ಕಿನ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

Related Articles

Back to top button