ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ಜೂನ್ 5ರಂದು ಆಚರಿಸಲಾಯಿತು.
‘ಹಸಿರೇ ಉಸಿರು’ ಎನ್ನುವ ಧ್ಯೇಯೋದ್ದೇಶ ಹೊಂದಿದ ಈ ಕಾರ್ಯಕ್ರಮವನ್ನು ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ.ಎಸ್.ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡುತ್ತಾ, ಮನುಷ್ಯ ಸ್ವಸ್ಥವಾಗಿ ಮತ್ತು ಆರೋಗ್ಯವಾಗಿ ಬದುಕಬೇಕಾದರೆ ನಾವು ಸುಂದರ ಪ್ರಕೃತಿಯನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕು. ಪ್ರತಿನಿತ್ಯ ನೆಲ-ಜಲವನ್ನು ಹಾಳು ಮಾಡುವ ಕಾಯಕವನ್ನು ಬಹಳ ಅವಸರದಿಂದ ಮಾಡುತ್ತಿದ್ದೇವೆ. ಇದು ಮನುಕುಲದ ನಾಶಕ್ಕೆ ಕಾರಣವಾಗುವಂತಹ ಅಂಶವಾಗಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೇರೆ ಬೇರೆ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ನೀಡಿದರು. ಕುಮಾರಿ. ತ್ರಿಶಾ ನಮ್ಮ ಪರಿಸರದ ಮಹತ್ವದ ಬಗ್ಗೆ ಮಾತನಾಡಿದರೆ, ಕ್ಷಿತಿಜ್ ಪ್ಲಾಸ್ಟಿಕ್ ಬಳಕೆ ಮತ್ತು ಅದರಿಂದಾಗುವ ಪರಿಸರ ಹಾನಿಯ ಬಗ್ಗೆ ತಿಳಿಸಿದರು. ಕು. ಸೃಷ್ಟಿ ಸಂತೋಷ್ ಸಾಲುಮರದ ತಿಮ್ಮಕ್ಕನ ಕುರಿತಾಗಿ ಮಾತನಾಡಿದರು. ಅಲ್ಲದೆ ತ್ಯಾಜ್ಯಗಳ ವಿಲೇವಾರಿಗೆ ಸಂಬಂಧಿಸಿದಂತೆ ಇ – ಬಿನ್ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಗೆ ಸಂಬಂಧಿಸಿದ ಸಂದೇಶ ನೀಡಿದರು. ಕು. ಅದಿತಿ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿದರು. ಸೃಜನಿ ವಂದಿಸಿದರು.