ರಾಜಕೀಯ

ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದರು ! : ಯತ್ನಾಳ್ 

Views: 0

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್‌. ಅಶೋಕ್ ಆಯ್ಕೆಯಾದ ನಂತರ ರಾಜ್ಯ ಬಿಜೆಪಿಯಲ್ಲಿ ಇಷ್ಟು ದಿನ ಸುಪ್ತವಾಗಿದ್ದ ಆಂತರಿಕ ಕಲಹ ಈಗ ಭುಗಿಲೆದ್ದಿದೆ. ಬಿಜೆಪಿ ಅಧಿಕಾರಲ್ಲಿ ಇದ್ದಾಗಿನಿಂದಲೂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸಮರ ಸಾರಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತಷ್ಟು ಕುಪಿತಗೊಂಡಿದ್ದಾರೆ.

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ಮಾಡುವಾಗ ಉತ್ತರ ಕರ್ನಾಟಕದ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಹೇಳುತ್ತಿದ್ದರೂ, ಪ್ರತಿಪಕ್ಷ ನಾಯಕ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಸಿಟ್ಟು ಈಗ ವಿಜಯೇಂದ್ರ ಕಡೆಗೆ ತಿರುಗಿದೆ.

ಕರ್ನಾಟಕ ಬಿಜೆಪಿಯೊಳಗೆ ಆಂತರಿಕ ಕಚ್ಚಾಟ ತೀವ್ರಗೊಂಡಿದ್ದಕ್ಕೆ ಸಾಕ್ಷಿಯಾಗಿ ಯತ್ನಾಳ್ ಮಾತನಾಡಿರುವ ಮತ್ತೊಂದು ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ‘ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಪಕ್ಷದ ಹೈಕಮಾಂಡಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮುಂದೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ರಾತ್ರಿ ಶ್ರೀಗಳನ್ನು ಭೇಟಿ ಮಾಡಿರುವ ಯತ್ನಾಳ್, ‘ಯಡಿಯೂರಪ್ಪ ಮೇಲೆ ಹೈಕಮಾಂಡ್‌ ನಾಯಕರಿಗೆ ಯಾಕೆ ಹೆದರಿಕೆ ಬಂದಿತೋ ಗೊತ್ತಿಲ್ಲ. ಶಿಸ್ತಿನ ಬಗ್ಗೆ ಅವರು ಮಾತನಾಡುತ್ತಾರೆ. ಹಾಗಿದ್ದರೆ, ನಾವೆಲ್ಲಾ ಗುಲಾಮರೇ? ನಮಗೆ ಶಕ್ತಿ ಇಲ್ಲವೇ? ನಮಗೂ ಜನ ಬೆಂಬಲ ಇದೆ’ ಎಂದಿದ್ದಾರೆ.

‘ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದಿಲ್ಲ ಎಂದು ಕೇಂದ್ರ ನಾಯಕರಿಗೆ ಯಡಿಯೂರಪ್ಪ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿ ಪಕ್ಷದ ಪರ ಪ್ರಚಾರ ಮಾಡುವ ಬದಲು ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರೆ’ ಎಂದರು.

ಬಿಎಸ್‌ವೈ ಕುಟುಂಬ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡುತ್ತಿದೆ ಎಂಬರ್ಥದಲ್ಲಿ ಶ್ರೀಗಳ ಮುಂದೆ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದು ಅಚ್ಚರಿಯ ಸಂಗತಿ. ಈಗ ಹೈಕಮಾಂಡ್ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರ ತಮ್ಮನ್ನು ಸೋಲಿಸಲು ಹಣ ನೀಡಿದ್ದರು ಎಂದು ಸ್ವತಃ ಬೊಮ್ಮಾಯಿ ಅವರೇ ನನಗೆ ಹೇಳಿದ್ದರು. ತಂದೆ-ಮಗ ಏನೆಲ್ಲಾ ಪಿತೂರಿ ನಡೆಸಿದ್ದಾರೆ ಎಂಬ ಸತ್ಯ ಹೊರಬರಬೇಕು’ ಎಂದು ಹೇಳಿದ್ದಾರೆ.

‘ಪ್ಯಾಲೇಸ್ ಗ್ರೌಂಡ್‌ನಲ್ಲಿ ನಾವು ರ‍್ಯಾಲಿ ಮಾಡುವಾಗ ಸಂದೀಪ್ ಪಾಟೀಲ್ ಎಂಬ ಐಪಿಎಸ್ ಆಫೀಸರ್ ಮೂಲಕ ನಮ್ಮನ್ನೆಲ್ಲಾ ಅರೆಸ್ಟ್‌ ಮಾಡಿಸುವುದಕ್ಕೆ ಮುಂದಾಗಿದ್ದ; ನಾನು ಜಾಡಿಸಿದ್ದಕ್ಕೆ ಹಿಂದೆ ಸರಿದ. ಸಂದೀಪ್ ಪಾಟೀಲರನ್ನು ಕಳುಹಿಸಿದ್ದೇ ಲಿಂಗಾಯತ ಅಧಿಕಾರಿಯಿಂದ ಲಿಂಗಾಯತ ನಾಯಕರನ್ನು ಬಂಧಿಸಲು. ಇದು ವಿಜಯೇಂದ್ರನದ್ದೇ ಕುತಂತ್ರ’ ಎಂದು ಏಕವಚನದಲ್ಲೇ ಟೀಕಿಸಿದ್ದಾರೆ.

Related Articles

Back to top button
error: Content is protected !!