ಬೆಂಗಳೂರು–ಕಾರವಾರ ಮಾರ್ಗದಲ್ಲಿ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ
Views: 34
ಕನ್ನಡ ಕರಾವಳಿ ಸುದ್ದಿ: ಮುಂಬರುವ ಹಬ್ಬದ ಋತುವಿನ ಪ್ರಯಾಣಿಕರ ನೂಕುನುಗ್ಗಲನ್ನು ನಿಭಾಯಿಸಲು ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್ಪ್ರೆಸ್ ಹಾಗೂ ಕಾರವಾರ- ಮಡಗಾಂವ್ ಜಂಕ್ಷನ್- ಕಾರವಾರ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ಬೆಂಗಳೂರು- ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಸೆ.2ರಿಂದ ಅಕ್ಟೋಬರ್2ರವರೆಗೆ ಹಾಗೂ ಕಾರವಾರ- ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ಸೆ.3ರಿಂದ ಅ.2ರವರೆಗೆ ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಎರಡು ಎಸಿ ಎಕಾನಮಿ, ಒಂದು ಸ್ಲಿಪರ್ ಹಾಗೂ ಎರಡು ಜನರಲ್ ಬೋಗಿಗಳು ಸೇರಿವೆ. ಈ ಮೂಲಕ ರೈಲುಗಳು ಒಟ್ಟು 19ಎಲ್ಎಚ್ಬಿ ಕೋಚ್ ಗಳೊಂದಿಗೆ ಈ ಅವಧಿಯಲ್ಲಿ ಸಂಚರಿಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಹೆಚ್ಚುವರಿ ರೈಲು: ಚೌತಿ ಹಬ್ಬದ ಪ್ರಯುಕ್ತ ಬೇಡಿಕೆಯ ಕೆಲವು ಮಾರ್ಗಗಳಲ್ಲಿ ಹೆಚ್ಚುವರಿ ರೈಲು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ. ಮುಂಬಯಿ ಸೆಂಟ್ರಲ್- ತೋಕೂರು ನಡುವೆ ಸೆಪ್ಟಂಬರ್ 8ರಂದು, ತೋಕೂರು- ಮುಂಬಯಿ ಸೆಂಟ್ರಲ್ ನಡುವೆ ಸೆ.9ರಂದು ಈ ಸಾಪ್ತಾಹಿಕ ವಿಶೇಷ ರೈಲು ಓಡಾಟ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು–ಕಾರವಾರ ಮಾರ್ಗದಲ್ಲಿ ಮತ್ತೊಂದು ರಾತ್ರಿ ರೈಲು ಆರಂಭಿಸಬೇಕು ಹಾಗೂ ಹಬ್ಬದ ಸಂದರ್ಭಗಳಲ್ಲಿ ಖಾಸಗಿ ಬಸ್ಗಳ ಹೆಚ್ಚುವರಿ ದರ ವಸೂಲಿಗೆ ಕಡಿವಾಣ ಹಾಕಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.






